ಚಿಕ್ಕಬಳ್ಳಾಪುರ: ಕೊಳವೆ ಬಾವಿ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಓರ್ವ ರೈತರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ವಡ್ಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಿನೋದ್ (28) ಮತ್ತು ವೆಂಕಟರೆಡ್ಡಿ (40) ಸ್ಥಳದಲ್ಲೇ ಮೃತಪಟ್ಟಿದ್ದು, ಗೋಪಾಲಪ್ಪ ಎಂಬವರು ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ರೈತ ಗೋಪಾಲಪ್ಪ ಅವರ ಹೊಲದಲ್ಲಿ ಕೊಳವೆ ಬಾವಿಯ ಮೋಟಾರ್ ಕೆಟ್ಟು ಹೋಗಿತ್ತು. ಹೀಗಾಗಿ ಟ್ರ್ಯಾಕ್ಟರ್ ಯಂತ್ರದ ಮೂಲಕ ಕೊಳವೆ ಬಾವಿಯಿಂದ ಮೋಟಾರ್ ಹೊರ ತೆಗೆಯಲಾಗುತ್ತಿತ್ತು. ಆದರೆ ಮೇಲೆ ಇದ್ದ ವಿದ್ಯುತ್ ತಂತಿಯ ಬಗ್ಗೆ ಯಾರೊಬ್ಬರು ಗಮನಿಸರಿಲ್ಲ. ಯಂತ್ರವು ಎತ್ತರಕ್ಕೆ ಹೋಗುತ್ತಿದ್ದಂತೆ 11 ಕೆ.ವಿ ವಿದ್ಯುತ್ ತಂತಿಗೆ ತಗುಲಿದ್ದು, ಸಂಪೂರ್ಣ ಟ್ರಾಕ್ಟರ್ ಗೆ ವಿದ್ಯುತ್ ಪ್ರವಹಿಸಿ ಟ್ರಾಕ್ಟರ್ ಮಾಲೀಕ ವೆಂಕಟರೆಡ್ಡಿ, ಕೆಲಸಕ್ಕೆ ಬಂದಿದ್ದ ವಿನೋದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಲ್ಲಿಯೇ ಇದ್ದ ರೈತ ಗೋಪಾಲಪ್ಪ ಅವರಿಗೂ ವಿದ್ಯುತ್ ತಗುಲಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv