ಬೆಂಗಳೂರು: ಶ್ರೀಲಂಕಾ ಬಾಂಬ್ ದಾಳಿ ಬೆನ್ನಲ್ಲೆ ಬೆಂಗಳೂರಿನಲ್ಲೂ ಹೈ ಅಲರ್ಟ್ ಶುರುವಾಗಿದೆ. ಬಿಎಂಟಿಸಿ ಅಧಿಕಾರಿಗಳು ಕೂಡ ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮ ಅಳವಡಿಕೆಗೆ ಸಜ್ಜಾಗಿದ್ದಾರೆ.
ಬಿಎಂಟಿಸಿ ಬಸ್ ನಿಲ್ದಾಣದ ಸಂಕೀರ್ಣ ಘಟಕಗಳಿಗೆ ಮೆಟಲ್ ಡಿಟೆಕ್ಟರ್ ಅಳವಡಿಸಲು ನಿರ್ಧರಿಸಿದ್ದಾರೆ. ಬೆಂಗಳೂರು ಉಗ್ರರ ಹಿಟ್ ಲಿಸ್ಟ್ ನಲ್ಲಿದ್ದು ಖಾಕಿ ಪಡೆ ಕೂಡ ಅಲರ್ಟ್ ಆಗಿದೆ. ಬೆಂಗಳೂರಿನಲ್ಲಿ 8 ಬಿಎಂಟಿಸಿ ಬಸ್ ನಿಲ್ದಾಣಗಳಿದ್ದು, ಇಲ್ಲಿ ಮೆಟಲ್ ಡಿಟೆಕ್ಟರ್ ಆಳವಡಿಸಲಾಗುತ್ತದೆ.
ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಬಿಎಂಟಿಸಿಯ ಭದ್ರತೆ ಮತ್ತು ಜಾಗೃತಿ ವಿಭಾಗದ ನಿರ್ದೇಶಕ ಅನುಪಮ್ ನಿರಂಜನ್ ಪ್ರತಿಕ್ರಿಯೆ ನೀಡಿದ್ದಾರೆ. ಮೆಟಲ್ ಡಿಟೆಕ್ಟರ್ ಅಳವಡಿಸಲಾಗುತ್ತದೆ. ಆದರೆ ಕೊಂಚ ಸಮಯ ಬೇಕಾಗುತ್ತದೆ. ಈಗಾಗಲೇ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾ ಮತ್ತು ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿದ್ದೇವೆ. ಪ್ಲಾನ್ ಮಾಡಿಕೊಂಡು ಬಜೆಟ್ ನೋಡಿಕೊಂಡು ಮೆಟಲ್ ಡಿಟೆಕ್ಟರ್ ಅಳವಡಿಸುತ್ತೇವೆ ಎಂದು ತಿಳಿಸಿದರು.
ಪ್ರಮುಖ ಸ್ಥಳಗಳಲ್ಲೂ ಪೊಲೀಸ್ ಕಣ್ಗಾವಲು:
ಶ್ರೀಲಂಕಾ ಬಾಂಬ್ ಸ್ಫೋಟದ ಹಿಂದೆ ಐಸಿಸ್ ಕೈವಾಡ ಇದೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಎಚ್ಚೆತ್ತ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಮಂದಿರ, ಮಸೀದಿ, ಚರ್ಚ್, ರೈಲು, ಬಸ್, ವಿಮಾನ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಖಡಕ್ ಆದೇಶ ಹೊರಡಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಲ್ಲ ಪಂಚತಾರ ಹೋಟೆಲ್ ಮಾಲೀಕರು, ಮಾಲ್ ಮಾಲೀಕರು, ಐಟಿ ಕಂಪನಿಗಳ ಮುಖ್ಯಸ್ಥರು ಹಾಗೂ ಸೆಕ್ಯೂರಿಟಿ ಆಫಿಸರ್ ಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅನುಸರಿಸಬೇಕಾದ ಕ್ರಮಗಳು ಹಾಗೂ ಸ್ಫೋಟಕಗಳ ಬಗ್ಗೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ಕುಮಾರ್ ಮಾಹಿತಿ ನೀಡಿದ್ದಾರೆ. ಜನರ ರಕ್ಷಣೆಗಾಗಿ ಹೋಟೆಲ್ಗಳು ಯಾವ ರೀತಿ ಮುಂಜಾಗೃತಾ ಕ್ರಮಗಳನ್ನ ವಹಿಸಬೇಕು. ಮೆಟಲ್ ಡಿಟೆಕ್ಟರ್, ಲಗೇಜ್ ಸ್ಕ್ಯಾನಿಂಗ್, ಭದ್ರತೆಯ ನಿರ್ವಹಣೆ ಹೇಗೆ ಎಂದು ಪೊಲೀಸ್ ಆಯುಕ್ತರು ನಿರ್ದೇಶನ ನೀಡಿದ್ದಾರೆ.