– ಕಾಂಗ್ರೆಸ್ ಉದ್ದೇಶ ರೈತರು ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ಸಿಲುಕಬೇಕು
ಚಿಕ್ಕಮಗಳೂರು: ಕಾಂಗ್ರೆಸ್ಸಿಗೆ (Congress) ಅಂಬೇಡ್ಕರ್ (Ambedkar) ಅವರನ್ನು ಕಂಡರೆ ಆಗುತ್ತಿರಲಿಲ್ಲ ಎಂದು ಭಾವಿಸಿದ್ದೆ. ಆದರೆ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಕಂಡರು ಆಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಾವು ಮಾಡಿರುವ ಪಠ್ಯ ಪುಸ್ತಕವನ್ನು ಈ ಸರ್ಕಾರದ ವಿರುದ್ಧ ಜನರ ಮುಂದೆ ಇಡುತ್ತೇವೆ. ಅದರಲ್ಲಿ ಏನು ತಪ್ಪಾಗಿದೆ ಎಂದು ಜನರನ್ನು ಕೇಳುತ್ತೇವೆ. ಚಕ್ರವರ್ತಿ ಸೂಲಿಬೆಲೆಯವರು (Chakravarti Sulibele) ಭಗತ್ ಸಿಂಗ್, ಸುಖದೇವ್, ರಾಜಗುರು ಬಗ್ಗೆ ದೇಶಭಕ್ತಿ ಪ್ರೇರಿತ ಲೇಖನ ಪಠ್ಯದಲ್ಲಿತ್ತು. ಇಲ್ಲಿಯವರೆಗೆ ಕಾಂಗ್ರೆಸ್ಸಿಗೆ ಅಂಬೇಡ್ಕರ್ ಅವರನ್ನು ಮಾತ್ರ ಕಂಡರೆ ಆಗುತ್ತಿರಲಿಲ್ಲ ಎಂದುಕೊಂಡಿದ್ದೆ ಎಂದಿದ್ದಾರೆ. ಇದನ್ನೂ ಓದಿ: ಟ್ಯೂಷನ್ ಮುಗಿಸಿ ಬರುತ್ತಿದ್ದಾಗ 10ನೇ ಕ್ಲಾಸ್ ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು
ಕಾಂಗ್ರೆಸ್ಸಿಗೆ ಯಾವುದೇ ಕ್ರಾಂತಿಕಾರಿಗಳನ್ನು ಕಂಡರೂ ಆಗುವುದಿಲ್ಲ. ಅದರಲ್ಲಿ ಇದ್ದದ್ದು ಚಕ್ರವರ್ತಿ ಸೂಲೆಬೆಲೆ ಅವರ ಜೀವನದ ಪಠ್ಯ ಅಲ್ಲ. ಅಂಬೇಡ್ಕರ್ ಬದುಕಿದ್ದಾಗಲೂ ಕಾಂಗ್ರೆಸ್ನವರು ವಿರೋಧ ಮಾಡಿದ್ದರು. ಚುನಾವಣೆಯಲ್ಲಿ ಸೋಲಿಸಿದ್ದರು. ಸತ್ತಾಗಲು ಅವಮಾನಿಸಿದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ ಜೊತೆ ರಾಹುಲ್ ಗಾಂಧಿ ಒಪ್ಪಂದ ದೇಶಭಕ್ತಿಗೆ ವಿರೋಧದ ಒಪ್ಪಂದ ಎಂದು ಅನುಮಾನ ಕಾಡುತ್ತಿದೆ. ಭಾರತ್ ತೆರೇ ತುಕ್ಕುಡೆ ಹೂಂಗೆ ಇನ್ಸಾ ಅಲ್ಲಾ ಅಂತ ಘೋಷಣೆ ಕೂಗಿದ ತುಕಡೆ ಗ್ಯಾಂಗಿಗೆ ಬೆಂಬಲ ಕೊಟ್ಟಿದ್ದಾರೆ. ಆದರೆ ದೇಶಭಕ್ತಿಯ ಪ್ರೇರಣೆಯಿಂದ ಕೂಡಿದ ಪಾಠವನ್ನು ತೆಗೆದು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ರದ್ದು ಮಾಡುವುದು ರೈತರನ್ನ ಉದ್ದಿಮೆದಾರರಾಗುವ ಅವಕಾಶವನ್ನ ತಪ್ಪಿಸುತ್ತದೆ. ಆದರೆ ರೈತರು ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಒದ್ದಾಡಬೇಕೆಂಬುದು ಕಾಂಗ್ರೆಸ್ ಉದ್ದೇಶವಾಗಿದೆ. ರೈತರಿಗೆ ಸತ್ಯದ ಅರಿವಾಗುವ ಕಾಲ ದೂರ ಇಲ್ಲ. ಇದರ ಅಡ್ಡ ಪರಿಣಾಮ ಕೆಲವೇ ದಿನಗಳಲ್ಲಿ ತಿಳಿಯಲಿದೆ. ಆಗ ಕಾಂಗ್ರೆಸ್ ಕೂಡ ಅಡ್ಡಡ್ಡ ಮಲಗುತ್ತದೆ ಎಂದಿದ್ದಾರೆ.
ರೈತ ತಾನು ಬೆಳೆದ ಬೆಳೆಗೆ ಎಲ್ಲಿ ಹೆಚ್ಚು ಬೆಲೆ ಸಿಗುತ್ತದೆಯೋ ಅಲ್ಲೇ ಮಾರಾಟ ಮಾಡಬಹುದಿತ್ತು. ಮುಕ್ತ ಮಾರಾಟಕ್ಕೆ ಎಪಿಎಂಸಿ ಕಾಯ್ದೆ ತಿದ್ದುಪಡಿಯಲ್ಲಿ ಅವಕಾಶವಿತ್ತು. ರೈತ ತಾನು ಬೆಳೆದ ಬೆಳೆಯನ್ನ ತನ್ನ ಹೊಲ, ಅಹಮದಾಬಾದ್, ಲಕ್ನೋ, ತಿರುವನಂತಪುರಂ ಎಲ್ಲಿ ಹೆಚ್ಚು ಬೆಲೆ ಇರುತ್ತದೆಯೋ ಅಲ್ಲೇ ಮಾರಬಹುದಿತ್ತು. ಗ್ರಾಹಕರ ಸಂಘಟನೆಗಳಿಗೂ ನೇರವಾಗಿ ಸರಬರಾಜು ಮಾಡುವ ಅವಕಾಶವಿತ್ತು. ಈಗ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಮಾಡಿದರೆ ರೈತರು ಲೈಸೆನ್ಸ್ಡ್ ದಲ್ಲಾಳಿಗಳಿಗೆ ಮಾರಬೇಕು. ಇದರಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ, ಇಂದಲ್ಲ ನಾಳೆ ರೈತರಿಗೆ ಸತ್ಯದ ಅರಿವಾಗಲಿದೆ. ಬಿಜೆಪಿ ರೈತರನ್ನ ದಲ್ಲಾಳಿಗಳ ಕಪಿಮುಷ್ಠಿಯಿಂದ ಮುಕ್ತ ಮಾಡಿತ್ತು. ಆದರೆ ಕಾಂಗ್ರೆಸ್ ಈಗ ಮತ್ತೆ ರೈತರನ್ನ ದಲ್ಲಾಳಿಗಳ ಕಪಿಮುಷ್ಠಿಗೆ ಕೊಡುತ್ತಿದೆ ಎಂದಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ರದ್ದು ಮಾಡಲು ಮುಂದಾಗಿರುವ ವಿಚಾರವಾಗಿ, ಸಾಮ, ದಾನ, ಭೇದ, ದಂಡ ನಾಲ್ಕನ್ನು ಬಳಸಿ ಮರು ಮತಾಂತರಕ್ಕೆ ಮುಂದಾಗಬೇಕು, ದೇಶ, ಹಿಂದೂ ಸಮಾಜವನ್ನ ಉಳಿಸಿಕೊಳ್ಳಲು ಅನಿವಾರ್ಯವಾಗಿ ಮಹಾಪಂಚಾಯಿತ್ ಕರೆಯಬೇಕು. ಮಠಾಧೀಶರು, ಸಮಾಜದ ಮುಖಂಡರು, ಜಗದ್ಗುರುಗಳು ಸನ್ಯಾಸಿಗಳ ಮಹಾಪಂಚಾಯತ್ ಕರೆಯಬೇಕು. ನಮ್ಮನ್ನ ನಾವು ಹಾಗೂ ದೇಶದ ರಕ್ಷಣೆ ಮಾಡಿಕೊಳ್ಳಲು ಸ್ವರಕ್ಷಣಾತ್ಮಕ ಕ್ರಮ ಕೈಗೊಳ್ಳಬೇಕು. ವಿವಿಧ ಸಮಾಜದ ಮಠಾಧೀಶರು ಮರು ಮತಾಂತರಕ್ಕೆ ಮುಂದಾಗಬೇಕು ಎಂದಿದ್ದಾರೆ.
ಬೇರೆ ಬೇರೆ ಕಾರಣಕ್ಕೆ ಹಿಂದೂ ಸಮಾಜದಿಂದ ದೂರ ಹೋದವರನ್ನ ಮರಳಿ ಹಿಂದೂ ಸಮಾಜಕ್ಕೆ ಕರೆತರಬೇಕು. ಹೇಗಿದ್ದರು ಸರ್ಕಾರವೇ ಮತಾಂತರಕ್ಕೆ ಮುಕ್ತವಾದ ಅವಕಾಶವನ್ನು ನೀಡಿದೆ. ಹಿಂದೂ ಧರ್ಮದ ಮರು ಮತಾಂತರಕ್ಕೆ ಮುಂದಾಗಬೇಕು. ಮತಾಂತರ ನಿಷೇಧ ಕಾಯ್ದೆಯನ್ನ ರದ್ದು ಮಾಡಲು ಮುಂದಾಗಿರುವ ಕಾಂಗ್ರೆಸ್ಸಿನ ನಿಲುವೇನು? ಕಾಂಗ್ರೆಸ್ ಬಲಾತ್ಕಾರದ ಮತಾಂತರದ ಪರವಾಗಿ ಇದೆಯೇ? ಆಸೆ, ಆಮಿಷ, ಬಲತ್ಕಾರ, ಮೋಸದ ಮತಾಂತರಕ್ಕೆ ನಿಷೇಧ ಇದೆ. ಬಲವಂತದ ಮತಾಂತರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು? ಬಲವಂತದ ಮತಾಂತರದ ಪರವಾಗಿ ಕಾಂಗ್ರೆಸ್ ಪಾರ್ಟಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಶಾಲಾ ಕಟ್ಟಡ ಕುಸಿದು ವಿದ್ಯಾರ್ಥಿ ದುರ್ಮರಣ- ಕಳಪೆ ಕಾಮಗಾರಿ ಆರೋಪ