ದಾವಣಗೆರೆ: ಸೇನೆಯನ್ನು ಚುನಾವಣಾ ಪ್ರಚಾರದ ವೇಳೆ ಬಳಸಿಕೊಳ್ಳಬಾರದು ಎಂದು ಚುನಾವಣಾ ಆಯೋಗದ ಆದೇಶಿಸಿದ್ದರೂ ಮೋದಿಯನ್ನು ಹೊಗಳುವ ಭರದಲ್ಲಿ ಬಿಜೆಪಿ ಸಂಸದ ಸಿದ್ದೇಶ್ವರ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ದಾವಣಗೆರೆಯ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ರೇಣುಕಾ ಮಂದಿರದಲ್ಲಿ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಜಿ.ಎಂ ಸಿದ್ದೇಶ್ವರ್ ಏರ್ ಸ್ಟ್ರೈಕ್ ಅನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ.
ಮೋದಿಯವರು ಪಾಕಿಸ್ತಾನಕ್ಕೆ ಏರ್ ಸ್ಟ್ರೈಕ್ ಮಾಡುವುದರ ಮೂಲಕ 11 ದಿನಗಳಲ್ಲಿ ಪ್ರತಿಕಾರ ತೀರಿಸಿಕೊಂಡಿದ್ದಾರೆ. ಅದಲ್ಲದೇ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಮೂರು ದಿನದೊಳಗೆ ಪಾಕ್ ಕಪಿಮುಷ್ಟಿಯಿಂದ ಬಿಡಿಸಿಕೊಂಡು ಬಂದಿರುವ ಹೆಗ್ಗಳಿಗೆ ಮೋದಿಯವರಿಗೆ ಸಲ್ಲುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಈ ಹಿಂದೆ ವಿರೋಧ ಪಕ್ಷಗಳು ವಾಯುಸೇನೆಯ ಏರ್ ಸ್ಟ್ರೈಕ್ ಸಾಧನೆಯನ್ನು ಬಿಜೆಪಿ ಚುನಾವಣೆಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದಾದ ಬಳಿಕ ಆಯೋಗ ಸೇನೆ ಮತ್ತು ಅಭಿನಂದನ್ ಅವರ ಫೋಟೋಗಳನ್ನು ಯಾರು ಪ್ರಚಾರಕ್ಕೆ ಬಳಸಿಕೊಳ್ಳಬಾರದು ಎಂದು ಸೂಚನೆ ನೀಡಿತ್ತು.