ಕಾರವಾರ: ಶಿರಸಿಯಲ್ಲಿ ನಡೆದ `ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಎನ್ನುವ ರಾಜ್ಯಮಟ್ಟದ ವಿಚಾರಗೋಷ್ಠಿಯಲ್ಲಿ ನಟ ಪ್ರಕಾಶ್ ರೈ ಪಾಲ್ಗೊಂಡಿದ್ದ ವೇದಿಕೆಯನ್ನು ಬಿಜೆಪಿಯ ಯುವ ಮೋರ್ಚಾ ಕಾರ್ಯಕರ್ತರು ಗೋ ಮೂತ್ರ ಸಿಂಪಡಿಸಿ ಶುದ್ಧಗೊಳಿಸಿದ್ದಾರೆ.
ಶಿರಸಿ ನಗರದ ಶ್ರೀ ರಾಘವೇಂದ್ರ ಮಠದ ಸಭಾ ಮಂಟಪದಲ್ಲಿ `ಪ್ರೀತಿ ಪದಗಳ ಪಯಣ’ ಎಂಬ ಸಮಿತಿ ಶನಿವಾರ ವಿಚಾರಗೋಷ್ಠಿ ಏರ್ಪಡಿಸಿತ್ತು. ಈ ಸಮಾರಂಭವನ್ನು ನಟ ಪ್ರಕಾಶ ರೈ ಉದ್ಘಾಟನೆ ಮಾಡಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಯುವಮೋರ್ಚಾ ಕಾರ್ಯಕರ್ತರು ಗೋಮೂತ್ರ ಸಿಂಪಡಿಸುವ ಮೂಲಕ ವೇದಿಕೆಯನ್ನು ಸ್ವಚ್ಛಗೊಳಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ವಿಶಾಲ್ ಮರಾಠೆ, ಸ್ವಯಂ ಘೋಷಿತ ಬುದ್ದಿಜೀವಿಗಳು, ಸೋಗಲಾಡಿ ಹಾಗೂ ಎಡಬಿಡಂಗಿಗಳು ಕಾರ್ಯಕ್ರಮ ಮಾಡಿ ಧಾರ್ಮಿಕ ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳವನ್ನು ಶುದ್ಧೀಕರಣವನ್ನು ಮಾಡಿದ್ದೇವೆ ಎಂದು ತಿಳಿಸಿದರು.
ಅಲ್ಲದೇ ಹಿಂದೂ ಸಮಾಜದವರು ಗೋವನ್ನು ಪೂಜನೀಯ ಸ್ಥಾನದಲ್ಲಿ ಆರಾಧಿಸುತ್ತಾರೆ. ಗೋಮಾಂಸವನ್ನು ಭಕ್ಷಣೆ ಮಾಡುವ ಹಾಗೂ ಹಿಂದೂ ದೇವತೆಗಳನ್ನು ಅಪಮಾನ ಮಾಡುವ ವ್ಯಕ್ತಿಗಳ ಆಗಮನದಿಂದ ಶಿರಸಿ ನಗರವೇ ಅಪವಿತ್ರವಾದಂತಾಗಿದೆ. ಇಂತಹ ಸೋಗಲಾಡಿ ಬುದ್ಧಿಜೀವಿ ಪ್ರಕಾಶ ರೈ ಯನ್ನು ಸಮಾಜ ಕ್ಷಮಿಸದು. ಇಂತಹ ಸಮಾಜಘಾತುಕರನ್ನು ಪರಿಗಣಿಸುವುದು ಮಹಾ ಪಾಪ. ಹೀಗಾಗಿ ನಗರ ಯುವ ಮೋರ್ಚಾ ವತಿಯಿಂದ ಕ್ಷೇತ್ರದ ಶುದ್ಧೀಗೊಳಿಸಲಾಯಿತು ಎಂದು ತಿಳಿಸಿದರು.