ಮಂಗಳೂರು: ಕಾಡುಕೋಣದ ಮರಿಯೊಂದು ದೇವಸ್ಥಾನದ ಕೊಳಕ್ಕೆ ಬಿದ್ದು ಪೇಚಿಗೆ ಸಿಲುಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ವಳಲಂಬೆ ಮಹಾವಿಷ್ಣು ದೇವಸ್ಥಾನದ ಬಳಿ ಇರುವ ತೆರೆದ ಕೊಳಕ್ಕೆ ಕಾಡುಕೋಣ ಆಕಸ್ಮಿಕವಾಗಿ ಬಿದ್ದಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಕೊಳದ ಸುತ್ತ ಕಾಡುಕೋಣ ನೋಡಲು ಜಮಾಯಿಸಿದ್ದಾರೆ. ಇದರಿಂದ ಕಾಡುಕೋಣ ಕೆರಳಿದೆ.
ರಾತ್ರಿ ಹೊತ್ತಿನಲ್ಲಿ ಆ ಭಾಗದಲ್ಲಿ ಕಾಡುಕೋಣಗಳ ಓಡಾಟ ಇದ್ದು, ಹಿಂಡಿನ ಜೊತೆ ಸಾಗುವಾಗ ಆಕಸ್ಮಿಕವಾಗಿ ಕೊಳಕ್ಕೆ ಬಿದ್ದಿರಬಹುದು. ಬೇಸಿಗೆಯಾದ್ದರಿಂದ ಕೊಳದಲ್ಲಿ ನೀರಿಲ್ಲದ ಪರಿಣಾಮ ಏನು ಅಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅಲ್ಲದೆ ಕೊಳದ ಸುತ್ತಲೂ ಜನ ನೆರೆದಿದ್ದನ್ನು ಕಂಡು ಕಾಡುಕೋಣಕ್ಕೆ ಗಲಿಬಿಲಿಯಾಗಿದೆ.
ಸ್ಥಳೀಯರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಕಾಡುಕೋಣವನ್ನು ಕೊಳದಿಂದ ಮೇಲೆಕ್ಕೆತ್ತಿದ್ದಾರೆ. ನೀರಿನಿಂದ ಮೇಲೆ ಬರುತ್ತಿದ್ದಂತೆಯೇ ಕಾಡುಕೋಣ ಕಾಡಿನತ್ತ ಪಲಾಯನ ಮಾಡಿದೆ.
https://www.youtube.com/watch?v=rDuz7UJ9xPY