– 30 ಲಕ್ಷ ಹೊಸ ಉದ್ಯೋಗ ಸೃಷ್ಟಿ ಗುರಿ
ಬೆಂಗಳೂರು: ಬೆಂಗಳೂರು ಮಹಾನಗರ ಪ್ರದೇಶವನ್ನು (BMR) ಜಾಗತಿಕ ಆರ್ಥಿಕ ಬೆಳವಣಿಗೆಯ ಪ್ರಮುಖ ಕೇಂದ್ರವನ್ನಾಗಿ ಪರಿವರ್ತಿಸಲು ಕರ್ನಾಟಕ (Karnataka) ಸರ್ಕಾರವು ಮಹತ್ತರ ಹೆಜ್ಜೆ ಇಟ್ಟಿದೆ. 2037ರ ವೇಳೆಗೆ ಬೆಂಗಳೂರನ್ನು ನಾವೀನ್ಯತೆ, ಕೃತಕ ಬುದ್ಧಿಮತ್ತೆ, ಸುಧಾರಿತ ಉತ್ಪಾದನೆ ಮತ್ತು ಸುಸ್ಥಿರ ನಗರಾಭಿವೃದ್ಧಿಯಲ್ಲಿ ವಿಶ್ವದ ಪ್ರಮುಖ ಹಬ್ಗಳಲ್ಲಿ ಒಂದಾಗಿ ರೂಪಿಸುವ ಬೃಹತ್ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ.
ಈ ಮಹತ್ವಾಕಾಂಕ್ಷಿ ಯೋಜನೆಯ ಪರಿಶೀಲನೆಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜೂನ್ 16 ರಂದು ಉನ್ನತ ಮಟ್ಟದ ಚುಕ್ಕಾಣಿ ಸಮಿತಿ (Steering Committee) ಸಭೆ ನಡೆಯಿತು. ಈ ಸಭೆಯಲ್ಲಿ ‘ಇನ್ಸ್ಟಿಟ್ಯೂಟ್ ಫಾರ್ ಸಸ್ಟೈನಬಿಲಿಟಿ, ಎಂಪ್ಲಾಯ್ಮೆಂಟ್ ಅಂಡ್ ಫೌಂಡೇಶನ್’ (ISEG Foundation) ವಿವಿಧ ವಲಯಗಳನ್ನು ಒಳಗೊಂಡ ಸಮಗ್ರ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಿದೆ.
ಆರ್ಥಿಕ ಮಾಸ್ಟರ್ ಪ್ಲಾನ್ ಮತ್ತು ಒಡಂಬಡಿಕೆ:
ಬೆಂಗಳೂರಿನ ಸುಸ್ಥಿರ ಅಭಿವೃದ್ಧಿಗಾಗಿ ಅಂದಿನ ಉಪಮುಖ್ಯಮಂತ್ರಿಗಳು ಹಾಗೂ ಮಹಾನಗರಾಭಿವೃದ್ಧಿ ಇಲಾಖೆಯ ಉಸ್ತುವಾರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರ ಮತ್ತು ಐಎಸ್ಇಜಿ ಫೌಂಡೇಶನ್ ಜಂಟಿಯಾಗಿ ಒಡಂಬಡಿಕೆಗೆ (SOI) ಸಹಿ ಹಾಕಿವೆ. ಈ ಯೋಜನೆಯ ಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರಿನ ಆರ್ಥಿಕತೆಯನ್ನು ಸುಮಾರು 390 ರಿಂದ 420 ಬಿಲಿಯನ್ ಅಮೆರಿಕನ್ ಡಾಲರ್ (ಅಂದಿನ ವಿನಿಮಯ ದರದಂತೆ ಸುಮಾರು ರೂ 35 ಲಕ್ಷ ಕೋಟಿಗೂ ಅಧಿಕ) ಮಟ್ಟಕ್ಕೆ ವಿಸ್ತರಿಸುವ ಹಾಗೂ ಹೆಚ್ಚುವರಿಯಾಗಿ 25 ರಿಂದ 30 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.
ದೇಶದಲ್ಲೇ ಮುಂಚೂಣಿಯಲ್ಲಿರುವ ಬೆಂಗಳೂರು ಆರ್ಥಿಕತೆ:
ಪ್ರಸ್ತುತ ಬೆಂಗಳೂರು ಮಹಾನಗರ ಪ್ರದೇಶವು ಸುಮಾರು 1.5 ಕೋಟಿ ಜನಸಂಖ್ಯೆ ಮತ್ತು 8,000 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ಯುಎಸ್ಡಿ 149 ಬಿಲಿಯನ್ ಮೌಲ್ಯದ ಆರ್ಥಿಕತೆಯೊಂದಿಗೆ ಕರ್ನಾಟಕದ ಒಟ್ಟು ರಾಜ್ಯ ದೇಶೀಯ ಉತ್ಪನ್ನಕ್ಕೆ (GSDP) 43%ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ.
ತಲಾ ಜಿಡಿಪಿ:
ಬೆಂಗಳೂರಿನ ತಲಾ ಜಿಡಿಪಿ ಸುಮಾರು 9,700 ಡಾಲರ್ ಆಗಿದ್ದು, ಇದು ಕರ್ನಾಟಕದ ಸರಾಸರಿಗಿಂತ (5,000 ಡಾಲರ್) 1.9 ಪಟ್ಟು ಮತ್ತು ಭಾರತದ ಸರಾಸರಿಗಿಂತ (2,500 ಡಾಲರ್) 4 ಪಟ್ಟು ಹೆಚ್ಚಾಗಿದೆ.
ವೇಗದ ಬೆಳವಣಿಗೆ:
2015-25ರ ಅವಧಿಯಲ್ಲಿ ಬೆಂಗಳೂರು ಶೇ. 9.7 ರಷ್ಟು ವಾರ್ಷಿಕ ಸಂಯೋಜಿತ ಬೆಳವಣಿಗೆ ದರ (CAGR) ದಾಖಲಿಸುವ ಮೂಲಕ ಹೈದರಾಬಾದ್ (ಶೇ. 7.5) ಮತ್ತು ಕರ್ನಾಟಕದ ಸರಾಸರಿಯನ್ನು (ಶೇ. 8.5) ಮೀರಿಸಿ ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರವಾಗಿ ಹೊರಹೊಮ್ಮಿದೆ.
ಹೊಸ ಬೆಳವಣಿಗೆ ಕೇಂದ್ರಗಳು:
ನಗರದ ಒಳಗೆ ಮತ್ತು ಹೊರಗೆ ಸಮತೋಲಿತ ಅಭಿವೃದ್ಧಿಯನ್ನು ತರಲು ಹೊಸ ‘ಬೆಳವಣಿಗೆ ಕೇಂದ್ರಗಳನ್ನು’ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಇವುಗಳನ್ನು ಕೈಗಾರಿಕೆ, ಐಟಿ/ಬಿಟಿ, ಸಂಶೋಧನೆ, ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ಒಳಗೊಂಡ ಸಮಗ್ರ ಹಬ್ಗಳಾಗಿ ಅಭಿವೃದ್ಧಿಪಡಿಸಲಾಗುವುದು. ಇದರಿಂದ ಕೇಂದ್ರ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ಸುತ್ತಮುತ್ತಲಿನ ಪ್ರದೇಶಗಳಿಗೂ ಆರ್ಥಿಕತೆ ವಿಸ್ತರಣೆಯಾಗಲಿದೆ.
ವಿಶ್ವದರ್ಜೆಯ ಸಾರಿಗೆ ಕ್ರಾಂತಿ : 287 ಕಿ.ಮೀ ವೃತ್ತಾಕಾರದ ರೈಲು:
ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ಹಾಡಲು ಸರ್ಕಾರ ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ಸಿದ್ಧಪಡಿಸಿದೆ. ನಗರದ ಸುತ್ತ 287 ಕಿಲೋಮೀಟರ್ ಉದ್ದದ ವೃತ್ತಾಕಾರ ರೈಲು ಜಾಲ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿದೆ.
ಮೆಟ್ರೋ ರೈಲು ವಿಸ್ತರಣೆಗಾಗಿ 400-500 ಕಿಲೋಮೀಟರ್ಗಳ ಹೆಚ್ಚುವರಿ ಮೆಟ್ರೋ ಜಾಲ ಹಾಗೂ 100-200 ಕಿಲೋಮೀಟರ್ಗಳ ಗ್ರೀನ್ಫೀಲ್ಡ್ ಮೆಟ್ರೋ ಕಾರಿಡಾರ್ಗಳು, 4 ಹೊಸ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ಕಾರಿಡಾರ್ಗಳು ಮತ್ತು ಉಪನಗರ ರೈಲು ಜಾಲದ ವಿಸ್ತರಣೆ.
ಮುಂದಿನ ಸರಣಿ ಕಾರ್ಯಾಗಾರಗಳು:
ಯೋಜನೆಯ ಯಶಸ್ಸಿಗಾಗಿ ಖಾಸಗಿ ವಲಯ ಹಾಗೂ ಹೂಡಿಕೆದಾರರನ್ನು ಒಳಗೊಂಡ ‘ಐಡಿಯಾಸ್ ಕಾರ್ಯಾಗಾರ-1’ ಅನ್ನು ಜೂನ್ ಕೊನೆಯ ವಾರದಲ್ಲಿ ಆಯೋಜಿಸಲಾಗುತ್ತಿದೆ. ತದನಂತರ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಮುಂದಿನ ಹಂತದ ಸಭೆಗಳು ನಡೆದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳಿಗೆ ಅಂತಿಮ ಪ್ರಸ್ತುತಿ ಸಲ್ಲಿಸಲಾಗುವುದು. ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜಾದ ಜಾಗತಿಕ ಮಟ್ಟದ ಸುಸ್ಥಿರ ಬೆಂಗಳೂರನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
