– ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಪುಂಡಾಟ
ಬೆಂಗಳೂರು: ಪ್ರತಿಷ್ಠಿತ ಅಲಯನ್ಸ್ ಕಾಲೇಜು ವಿದ್ಯಾರ್ಥಿಗಳ ಪುಂಡಾಟ ದಿನೇದಿನೇ ಹೆಚ್ಚಾಗುತ್ತಿದ್ದು ನಿಲ್ಲುವ ಲಕ್ಷಣಗಳೇ ಯಾಕೋ ಕಾಣುತ್ತಿಲ್ಲ ಇಂದು ಸಹ ಗಾಂಜಾ ಹಾಗೂ ಎಣ್ಣೆ ಮತ್ತಿನಲ್ಲಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ಮಾಡಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿ ಗಾಂಜಾ ಹಾಗೂ ಮದ್ಯದ ಅಮಲಿನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಪಾದಚಾರಿಗಳಿಗೆ ಗುದ್ದಿ ಬಳಿಕ ಚಂದಾಪುರ ರಸ್ತೆಯಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದು ಕೊನೆಗೆ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಮುಂದೆ ಹೋಗಲು ಸಾಧ್ಯವಾಗದೆ ನಿಂತಿದೆ. ಘಟನೆಯಲ್ಲಿ ಓರ್ವ ಯುವತಿ ಗಂಭೀರ ಗಾಯಗೊಂಡರೆ ಮತ್ತೊಬ್ಬ ಯುವಕ ಸಂದೀಪ್ ಸ್ಥಿತಿ ಚಿಂತಾಜನಕವಾಗಿದೆ.
ಕುಡಿದು ಅಪಘಾತ ನಡೆಸಿದ ಕಾಲೇಜು ವಿದ್ಯಾರ್ಥಿಯನ್ನು ಸ್ಥಳೀಯರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಬಳಿಕ ಆನೇಕಲ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ವಾರವೂ ಸಹ ಕಾಲೇಜಿನ ಸಮಯದಲ್ಲಿಯೇ ವಿದ್ಯಾರ್ಥಿಗಳು ಕಂಠ ಪೂರ್ತಿ ಮದ್ಯ ಸೇವನೆ ಮಾಡಿ ಕಾಲೇಜಿನ ಬ್ಯಾಗ್ನಲ್ಲಿಯೇ ಎಣ್ಣೆ ಬಾಟಲ್ಗಳನ್ನು ಇಟ್ಟುಕೊಂಡಿದ್ದು ಬೆಳಕಿಗೆ ಬಂದಿತ್ತು. ಬಳಿಕ ಇಂದು ಸಹ ಇದೇ ರೀತಿ ಮದ್ಯ ಹಾಗೂ ಗಾಂಜಾ ಮತ್ತಿನಲ್ಲಿ ಸರಣಿ ಅಪಘಾತ ನಡೆಸಿ ಜನರ ಪ್ರಾಣದ ಜೊತೆ ಚೆಲ್ಲಾಟ ನಡೆಸುತ್ತಿರುವ ಈ ಕಾಲೇಜು ವಿದ್ಯಾರ್ಥಿಗಳ ಪುಂಡಾಡಕ್ಕೆ ಸ್ಥಳೀಯರ ಆಕ್ರೋಶಕ್ಕೆ ವ್ಯಕ್ತಪಡಿಸುತ್ತಿದ್ದಾರೆ.
ಈ ರೀತಿಯ ಘಟನೆಗಳು ಪದೇ ಪದೇ ನಡೆಯುತ್ತಿದ್ದರು ಆನೇಕಲ್ ಪೊಲೀಸರು ಮಾತ್ರ ಕಾಲೇಜು ಆಡಳಿತ ಮಂಡಳಿ ಹಾಗೂ ರಂಪಾಟ ಮಾಡುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದಲೇ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.