ಬೆಂಗಳೂರು: ಅಂದು ನಕ್ಕವರು ಇಂದು ಕಾಲ್ ಮಾಡಿ ವಿಶ್ ಮಾಡುತ್ತಿದ್ದಾರೆ ಎಂದು ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡ್ಗ ಪ್ರಥಮ್ ಹೇಳಿದ್ದಾರೆ.
ಕನ್ನಡ ಬಿಗ್ ಬಾಸ್ ಸೀಸನ್ 4 ವಿನ್ನರ್ ಆಗಿದ್ದ ಪ್ರಥಮ್, ನಂತರ ಏನು ಮಾಡುತ್ತೀರಾ ಎಂದು ಕೇಳಿದಾಗ ನಾನು ವ್ಯವಸಾಯ ಮಾಡುತ್ತೇನೆ ಎಂದು ಹೇಳಿದ್ದರು. ಆಗ ಅಲ್ಲಿದ್ದವರು ನಕ್ಕಿದ್ದರು. ಈಗ ಪ್ರಥಮ್ ಫುಲ್ ಟೈಮ್ ರೈತನಾಗಿ ಕೆಲಸ ಮಾಡುತ್ತಿದ್ದಾರೆ. ಈ ವಿಚಾರವಾಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಹಾಕಿರುವ ಪ್ರಥಮ್, ಅಂದು ನಕ್ಕವರು ಇಂದು ಕಾಲ್ ಮಾಡಿ ವಿಶ್ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಫೋಟೋ ಹಾಕಿ ಪೋಸ್ಟ್ ಮಾಡಿರುವ ಪ್ರಥಮ್, ಉಪ್ಪಿ ಸರ್ ‘ಎ’ ಮೂವಿಲಿ ಒಂದು ಮಾತು ಹೇಳುತ್ತಾರೆ. 92 ಕೋಟಿ ಮೈನಸ್ 1 ಎಂದು. ಆದರೆ ಈಗ 132 ಕೋಟಿ ಆಗಿದೆ. ತಿನ್ನೋ ಬಾಯಿ ಜಾಸ್ತಿಯಾಗಿದೆ. ದುಡಿಯೋ ಕೈಗಳು ಕಮ್ಮಿಯಾಗಿವೆ. ಕೆಲವು ಕೆಲಸಗಳು ಬಹಳ ಖುಷಿ ಕೊಡುತ್ತವೆ. ನನ್ನ ಊರ ಬಳಿ ನಾನೇ ಖರೀದಿಸಿದ ಭೂಮಿಯಲ್ಲಿ ಬಹಳ ಪ್ರೀತಿಯಿಂದ ಭೂಮಿತಾಯಿ ಸೇವೆ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
https://www.instagram.com/p/B81Cv0rgx9r/
ಹುರಳಿ ಜೋಳ ಬೆಳೆದೆ. ನಮ್ ಅಪ್ಪ ಫುಲ್ ಬೆಳೆದಿದ್ದು. ನಾನು ಹೂಡಿಕೆ ಮಾಡಿ ಕಂಪ್ಲೀಟ್ ಬೆಳೆ ತಗೆಯೋ ತನಕ ನಾನೇ ಕೆಲಸಗಾರನ ಥರ ದುಡಿದಿದ್ದೀನಿ. ಭರ್ಜರಿ ಬೆಳೆ ಬಂದಿದೆ. ನಟಭಯಂಕರ ಜೊತೆ ಒಪ್ಪಿಕೊಂಡ ಸಿನಿಮಾ ಮುಗಿದ ಕೂಡಲೇ ಫುಲ್ ಕೃಷಿಕ ನಾನು. ಯಾರೆಲ್ಲಾ ನನ್ನ ನೋಡಿ ನಕ್ಕಿದ್ರೋ ಎಲ್ಲರೂ ಕಾಲ್ ಮಾಡಿ ಶುಭಾಶಯ ತಿಳಿಸುತ್ತಲೇ ಇದ್ದಾರೆ. ಇದಲ್ಲವೇ ನಿಜವಾದ ಸಕ್ಸಸ್, ಧನ್ಯವಾದಗಳು. ದುಡಿಮೆಯ ನಂಬಿ ಬದುಕು. ಅದರಲ್ಲೇ ದೇವರ ಹುಡುಕು ಎಂದು ಬರೆದು ಅಂದು ಅವರನ್ನು ನೋಡಿ ನಕ್ಕವರಿಗೆ ಟಾಂಗ್ ನೀಡಿದ್ದಾರೆ.
ಬಿಗ್ ಬಾಸ್ ಮುಗಿದ ಮೇಲೆ ನಾನು ವ್ಯವಸಾಯ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಬಿಗ್ ಬಾಸ್ ಕಳೆದು ವರ್ಷಗಳೇ ಅದರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾಗ ಪ್ರಥಮ್ ಹೇಳಿದ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಕೊಳ್ಳೇಗಾಲದಿಂದಾಚೆ ಒಂದು ಪುಟ್ಟ ಗ್ರಾಮದಲ್ಲಿ ಪ್ರಥಮ್ ಭೂಮಿ ಖರೀದಿಸಿ ವ್ಯವಸಾಯ ಮಾಡಿ ತಾನು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಜೊತೆಗೆ ಜೋಳ, ಹುರುಳಿಕಾಳು ಬೆಳೆ ಬೆಳೆದು, ಇದರಿಂದಾಗಿ 2.5 ಲಕ್ಷ ರೂ. ಲಾಭ ಮಾಡಿದ್ದಾರಂತೆ.
ದೇವ್ರಂಥ ಮನುಷ್ಯ, ಎಮ್ಎಲ್ಎ, ನಟಭಯಂಕರ ಇತ್ಯಾದಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿರುವ ಪ್ರಥಮ್, ವ್ಯವಸಾಯ ಮಾಡಲು ಹಣ ಹಾಕಿದ್ದಾರೆ. ಆದರೆ ಇದರ ಪೂರ್ಣ ಜವಾಬ್ದಾರಿ ಹೊತ್ತವರು ಅವರ ತಂದೆ. ತಿಂಗಳಲ್ಲಿ ಮೂರು ಬಾರಿ ಊರಿಗೆ ಹೋಗಿ ವ್ಯವಸಾಯ ಏನಾಯ್ತು ಎಂಬುದರ ಕಡೆ ಪ್ರಥಮ್ ಗಮನವಿಟ್ಟಿದ್ದರು. ನಾಲ್ಕು ಎಕರೆ ಭೂಮಿಯಲ್ಲಿ ಹುರುಳಿ ಹಾಗೂ ಜೋಳದ ಭರ್ಜರಿ ಬೆಳೆ ಬೆಳೆದಿದ್ದಾರೆ.
ಕೃಷಿ ಜೊತೆಗೆ ತಮ್ಮ ಸಿನಿಮಾದಲ್ಲಿಯೂ ನಿರತರಾಗಿದ್ದಾರೆ. ಅಲ್ಲದೆ ಕನ್ನಡದ ಹಲವು ಸಿನಿಮಾಗಳನ್ನು ನೋಡಿ ಅವುಗಳ ಬಗ್ಗೆ ಪ್ರಥಮ್ ತಮ್ಮ ಅಭಿಪ್ರಾಯ ಹೇಳುತ್ತಾರೆ. ಸರ್ಕಾರಿ ಶಾಲಾ ಮಕ್ಕಳ ಕಾರ್ಯಕ್ರಮವಿರಲಿ, ಇನ್ನಾವುದೇ ಕಾರ್ಯಕ್ರಮವಿರಲಿ ಪ್ರಥಮ್ ಹೋಗುತ್ತಾರೆ. ಇದರ ಜೊತೆಗೆ ಅವರೇ ಅಭಿನಯಿಸಿ ನಿರ್ದೇಶನ ಮಾಡುತ್ತಿರುವ ನಟಭಯಂಕರ ಚಿತ್ರ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ.