ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟಾಭಿಷೇಕ ಖಚಿತವಾಗುತ್ತಿದ್ದಂತೆ ಕೊನೆ ಗಳಿಗೆಯ ಕಸರತ್ತನ್ನ ಸಿದ್ದರಾಮಯ್ಯ ಆ್ಯಂಡ್ ಟೀಂ ದೆಹಲಿಯಲ್ಲಿ ಆರಂಭಿಸಿದೆ.
ಒಕ್ಕಲಿಗರಿಗೆ ಕೊಡುವುದಾದರೆ ಮಾಜಿ ಸಂಸದ ಮುದ್ದ ಹನುಮೇಗೌಡರು ಕೂಡ ಅರ್ಹರಿದ್ದಾರೆ ಎಂದು ಸಿದ್ದರಾಮಯ್ಯ ಬಣ ಹೊಸ ದಾಳ ಉರುಳಿಸಿದೆ. ಈ ಮೂಲಕ ಡಿ.ಕೆ ಶಿವಕುಮಾರ್ ಹೆಸರಿಗೆ ಅಡ್ಡಗಾಲು ಹಾಕುವ ಕೊನೆಯ ಯತ್ನವಾಗಿ ಮಾಜಿ ಸಂಸದರ ಹೆಸರನ್ನು ಚಾಲ್ತಿಗೆ ತಂದಿದ್ದಾರೆ. ಅಲ್ಲದೆ ದೆಹಲಿಯಲ್ಲಿ ಮುದ್ದಹನುಮೇಗೌಡರ ಹೆಸರನ್ನು ಮುಂದಿಟ್ಟು ಲಾಬಿ ಮಾಡತೊಡಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮುದ್ದಹನುಮೇಗೌಡರಿಗೆ ಆದ ಅನ್ಯಾಯ ಸರಿಪಡಿಸಲು ಇದೊಂದು ಅವಕಾಶವಾಗಿದೆ. ಜೊತೆಗೆ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸಿದಂತಾಗುತ್ತದೆ ಅನ್ನೋ ವಾದವನ್ನ ಡಿ.ಕೆ ಶಿವಕುಮಾರ್ ವಿರೋಧಿ ಬಣ ಮುಂದಿಟ್ಟಿದೆ. ಈ ಪ್ರಯತ್ನ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಬಣ ಕೆಪಿಸಿಸಿ ಮೇಲಿನ ಹಿಡಿತಕ್ಕಾಗಿ ಇಂತದೊಂದು ದಾಳವನ್ನಂತು ಉರುಳಿಸಿದೆ ಎಂಬುದಾಗಿ ತಿಳಿದುಬಂದಿದೆ.