ಬೆಂಗಳೂರು: ವರಿಷ್ಠರ ಮೇಲೆ ಸಿಟ್ಟಾಗಿರೋ ಜೆಡಿಎಸ್ ಅಸಮಾಧಾನಿತ ಮುಖಂಡರು ಇಂದು ಮಹತ್ವದ ಸಭೆ ನಡೆಸಲಿದ್ದಾರೆ.
ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಅಸಮಾಧಾನಿತ ಶಾಸಕರು, ಮಾಜಿ ಶಾಸಕರು, ಪರಿಷತ್ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರ ಇದ್ದಾಗ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಸರ್ಕಾರ ಹೋದ ನಂತರವೂ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಗೌರವ ಕೊಡ್ತಿಲ್ಲ ಎಂದು ಆಕ್ರೋಶಗೊಂಡಿದ್ದಾರೆ.
ಹೀಗಾಗಿ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧಾರ ಮಾಡಲು ಸಭೆ ಸೇರುತ್ತಿದ್ದಾರೆ. ಜೆಡಿಎಸ್ನಲ್ಲೇ ಮುಂದುವರಿಯಬೇಕಾ ಅಥವಾ ಬೇರೆ ಪಕ್ಷಕ್ಕೆ ಹೋಗಬೇಕಾ ಎಂಬುದರ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಇಂದಿನ ಸಭೆ ಬಳಿಕ ನವೆಂಬರ್ ನಲ್ಲಿ ಮತ್ತೊಂದು ಸಭೆ ಸೇರಲು ನಿರ್ಧಾರ ಮಾಡಿದ್ದಾರೆ.
ಬಹುತೇಕ ಅಸಮಾಧಾನಿತ ಮುಖಂಡರು ಉಪ ಚುನಾವಣೆ ಬಳಿಕ ಮಹತ್ವ ನಿರ್ಧಾರ ತೆಗೆದುಕೊಳ್ಳುವ ಚಿಂತನೆಯಲ್ಲಿ ಇದ್ದಾರೆ. ಕಾಂಗ್ರೆಸ್ ಅಥವಾ ಬಿಜೆಪಿಗೆ ಸೇರಲಿದ್ದಾರೆ ಅನ್ನೋ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿ ಬರುತ್ತಿವೆ. ಇದೆಲ್ಲ ನಿಜನಾ ಅನ್ನೋದು ಇಂದಿನ ಸಭೆಯಲ್ಲಿ ಗೊತ್ತಾಗಲಿದೆ.