– ಹೆಚ್ಡಿಕೆ ಬೈದವರಿಗೆ ಈ ಸರ್ಕಾರ ಗಿಫ್ಟ್ ಕೊಡುತ್ತೆ
ಬೆಂಗಳೂರು: ಲೋಕಸಭೆ ಚುನಾವಣೆಯವರೆಗೆ ಐಟಿ ಇಡಿ ಎಂದರೆ ನಮಗೆ ಗೊತ್ತೆ ಇರಲಿಲ್ಲ ಅದಕ್ಕೂ ಮುಂಚೆ ನನಗೆ ಐಟಿಸಿ ಸಿಗರೇಟ್ ಮಾತ್ರ ಗೊತ್ತಿತ್ತು ಎಂದು ಹೇಳುವ ಮೂಲಕ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರು ವ್ಯಂಗ್ಯವಾಡಿದ್ದಾರೆ.
ಇಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಟಿ ಇಡಿ ಇದೆ ಎಂದು ಗೊತ್ತಾಗಿದ್ದೆ ನಮಗೆ ಈ ಬಾರಿಯ ಲೋಕಸಭೆಯ ಚುನಾವಣೆಯ ವೇಳೆ. ಅದಕ್ಕೂ ಮುನ್ನಾ ನಮಗೆ ಐಟಿಸಿ ಸಿಗರೇಟ್ ಮಾತ್ರ ಗೊತ್ತಿತ್ತು. ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಐಟಿ ದಾಳಿ ಆದಗ ನಮ್ಮಲ್ಲಿ ಅವು ಇದೆ ಎನ್ನುವುದು ತಿಳಿಯಿತು ಎಂದು ಐಟಿ ಮತ್ತು ಇಡಿ ಸಂಸ್ಥೆಗಳ ಮೇಲೆ ಕಿಡಿಕಾರಿದರು.
ಇದೇ ವೇಳೆ ಅಪೆಕ್ಸ್ ಬ್ಯಾಂಕ್ ನ ಅಕ್ರಮದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯ ಮಾಡಿ. ಸಹಕಾರ ಇಲಾಖೆಯಲ್ಲಿ ಅಕ್ರಮ ತುಂಬಿ ತುಳುಕುತ್ತಿದೆ. ಆದರೆ ಸಿಎಂ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನವಾಗಿದ್ದಾರೆ. ಇದೇ ಯಡಿಯೂರಪ್ಪ ಸಾಧನೆ ಎಂದು ಲೇವಡಿ ಮಾಡಿದರು. ಐಎಂಎ ಹಗರಣದಲ್ಲಿ ಅದರ ಅಂಗ ಸಂಸ್ಥೆಗಳಾದ ಐಎಂಎ ಹೌಸಿಂಗ್ ಸೊಸೈಟಿ, ಫೈನಾನ್ಸ್, ಕ್ರೆಡಿಟ್ ಕೊ ಆಪರೇಟೀವ್ ಸೊಸೈಟಿಯಿಂದ ಜನರಿಗೆ ಎರಡು ಸಾವಿರ ಕೋಟಿ ಅಕ್ರಮವಾಗಿದೆ. ಆದರೆ ಸರ್ಕಾರ ಈವೆಗೂ ಯಾವುದೇ ಕ್ರಮ ತಗೊಂಡಿಲ್ಲ ಎಂದು ಕಿಡಿಕಾರಿದರು.
ಎರಡು ರಾಷ್ಟ್ರೀಯ ಪಕ್ಷಗಳು ದೇವೇಗೌಡರನ್ನ ಮುಗಿಸಲು ಕೆಲಸ ಮಾಡ್ತಿವೆ. ಚುನಾವಣೆಯಲ್ಲಿ ಸೋಲಿಸಿದ್ರು. ಸಹಕಾರ ಇಲಾಖೆ ನಡೆಸುತ್ತಿರೋರು ಸಹಕಾರಿ ಸಚಿವರು ಅಲ್ಲ. ಇಲಾಖೆ ಪ್ರಧಾನ ಕಾರ್ಯದರ್ಶಿ, ಮತ್ತು ದೇವೇಗೌಡರನ್ನ ಬೈದವರು ನಡೆಸುತ್ತಿದ್ದಾರೆ. ದೇವೇಗೌಡರಿಗೆ ಬೈದವರಿಗೆ ಈ ಸರ್ಕಾರ ಗಿಫ್ಟ್ ಕೊಡುತ್ತೆ. ದೇವೇಗೌಡರನ್ನು ಬೈಯುತ್ತಿರೋರು ಯಾರು ಎಂದು ನಿಮಗೆ ಗೊತ್ತು ನಾನು ಹೇಳೊಲ್ಲ ಅಂತ ಪರೋಕ್ಷವಾಗಿ ತುಮಕೂರಿನ ಮಾಜಿ ಶಾಸಕ ರಾಜಣ್ಣ ವಿರುದ್ಧ ರೇವಣ್ಣ ಕಿಡಿಕಾರಿದರು.
ರೈತರಿಂದ ಸರ್ಕಾರ ನೇರವಾಗಿ ಜೋಳ ಖರೀದಿ ಮಾಡಬೇಕು ಎಂದು ರೇವಣ್ಣ ಸರ್ಕಾರವನ್ನು ಒತ್ತಾಯ ಮಾಡಿದರು. ಟೆಂಡರ್ ಇಲ್ಲದೆ ರೈತರಿಂದ ನೇರವಾಗಿ ಜೋಳ ಖರೀದಿ ಮಾಡಬೇಕು ಅಂತ ನಾನು ಸಿಎಂಗೆ ಪತ್ರ ಬರೆದಿದ್ದೆ. ಆದರೆ ಸಿಎಂ ನನ್ನ ಪತ್ರ ಕಾಸದ ಬುಟ್ಟಿಗೆ ಹಾಕಿದ್ದಾರೆ ಎಂದರು.