ಬೆಂಗಳೂರು: ತಿಂಗಳ ಹಿಂದೆ ಬೆಂಕಿ ಉಗುಳಿದ್ದ ಬೆಳ್ಳಂದೂರು ಕೆರೆ ಈಗ ನೊರೆ ಉಗುಳುತ್ತಿದೆ. ಬೆಂಗಳೂರು ಸೇರಿದಂತೆ ನಗರದ ಸುತ್ತಮುತ್ತ ಕಳೆದೆರೆಡು ದಿನಗಳಿಂದ ಧಾರಾಕಾರ ಮಳೆ ಆಗ್ತಿದ್ದು, ಪರಿಣಾಮ ಬೆಳ್ಳಂದೂರು ಕೆರೆಯಲ್ಲಿ ಆಳೆತ್ತರಕ್ಕೆ ನೊರೆ ಏರಿದೆ.
ಇದರಿಂದ ಕೆರೆಯ ಸುತ್ತ ದುರ್ವಾಸನೆ ಹಬ್ಬಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಮಳೆಯಿಂದಾಗಿ ರಭಸವಾಗಿ ನೀರು ಹರಿಯುತ್ತಿರೋದ್ರಿಂದ ಇಂದು ಮತ್ತಷ್ಟು ನೊರೆ ಹೆಚ್ಚಾಗುವ ಸಾಧ್ಯತೆ ಇದೆ. ಇತ್ತ ವರ್ತೂರು ಕೆರೆಯಲ್ಲೂ ಕೂಡ ಇದೇ ಪರಿಸ್ಥಿತಿ ಇದೆ.
ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ, ಬಿಡಿಎ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ನೋಟಿಸ್ ನೀಡಿತ್ತು. ಎರಡು ವಾರಗಳಲ್ಲಿ ಉತ್ತರಿಸುವಂತೆ ತಾಕೀತು ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಆರು ಜನರ ತಂಡದ ಕಮಿಟಿ ರಚನೆ ಮಾಡಿದೆ. ಕಮಿಟಿಯಲ್ಲಿ ಸೀನಿಯರ್ ಸೈಂಟಿಫಿಕ್ ಆಫೀಸರ್ಗಳಿದ್ದು, ಮುಂದಿನ ವಾರ ವರದಿ ನೀಡಲಿದ್ದಾರೆ. ಮತ್ತೆ ಮಾರ್ಚ್ 20 ರಂದು ವಿಚಾರಣೆ ನಡೆಯಲಿದ್ದು ಎನ್ಜಿಟಿ ಯಾವ ನಿರ್ಧಾರ ಕೈಗೊಳ್ಳುತ್ತೋ ಕಾದು ನೋಡಬೇಕು.
ಕಳೆದ ಬಾರಿ ಬೆಂಕಿ, ನೊರೆ ಕಾಣಿಸಿಕೊಂಡಾಗ ಬಿಬಿಎಂಪಿ ಮೇಯರ್ ಪದ್ಮಾವತಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ರು. ಆದ್ರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗೆ ಬೇಸಿಗೆಯಲ್ಲಿ ಬೆಂಕಿ, ಮಳೆಗಾಲದಲ್ಲಿ ನೊರೆ ಮತ್ತೆ ಮತ್ತೆ ಕಾಣಿಸ್ತಿರೋದು ಸ್ಥಳೀಯರನ್ನು ತೀವ್ರ ಆತಂಕಕ್ಕೀಡು ಮಾಡಿದೆ.