ಬೆಂಗಳೂರು: ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಹತ್ತಾರು ನಾಯಿಗಳ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಬೀದಿ ನಾಯಿಗಳ ಸಾವಿಗೆ ಕಾರಣವಾಗಿದ್ದು, ಆನಾಥಾಶ್ರಮದಲ್ಲಿ ಮಿಕ್ಕಿದ ಊಟ ಬೀದಿಗೆ ಎಸೆದಿದ್ದೆ ಕಾರಣ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆಶ್ರಮದ ಮ್ಯಾನೇಜರ್ ಜೋಸೆಫ್ ಫ್ರಾನ್ಸಿಸ್ನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಮಿಕ್ಕಿದ ಊಟವನ್ನು ಕೆಲವರು, ಆನಾಥ ಆಶ್ರಮಕ್ಕೆ ತಂದು ಕೊಟ್ಟಿದ್ದರು. ಆ ಊಟವನ್ನು ಮಕ್ಕಳು ಉಪಯೋಗಿಸಿದ ನಂತರ ಎರಡು ದಿನ ಅನಾಥಶ್ರಮದಲ್ಲೇ ಉಳಿದಿತ್ತು. ಇದನ್ನು ನೋಡಿದ ಮ್ಯಾನೇಜರ್ ಫ್ರಾನ್ಸಿಸ್ ಬೀದಿ ನಾಯಿಗಳಿಗೆ ಹಾಕಿದ್ದರು.
ಎರಡು ದಿನದ ಹಿಂದಿನ ಊಟ ತಿಂದ ಹನ್ನೊಂದು ನಾಯಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದವು. ಬೆಳಗ್ಗೆ ಅಲ್ಲಿಗೆ ವಾಕಿಂಗ್ ಬಂದ ಸ್ಥಳೀಯರು ತಕ್ಷಣ ವೆಟರ್ನರಿ ಡಾಕ್ಟರ್ ಗೆ ಕರೆಸಿ ಚಿಕಿತ್ಸೆ ಕೊಡಿಸುವಷ್ಟರಲ್ಲಿ ಏಳು ನಾಯಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮೂರು ನಾಯಿಗಳು ಪ್ರಾಯಪಾಯದಿಂದ ಪರಾಗಿದ್ದವು. ಈ ಸಂಬಂಧ ಸ್ಥಳೀಯರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಆನಾಥಾಶ್ರಮದ ಊಟದಿಂದ ನಾಯಿಗಳು ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದ್ದು, ನಾಯಿಗಳು ಸಾವನ್ನಪ್ಪಿರುವ ವಿಷ ಅಹಾರ ಯಾವುದು ಅನ್ನೋದು ಎಫ್ಎಸ್ಎಲ್ ವರದಿಯಿಂದ ಬಹಿರಂಗವಾಗಬೇಕಿದೆ.