ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಸದಾಶಿವನಗರದಲ್ಲಿರುವ ಮನೆಯಲ್ಲಿ ಐಟಿ ಶೋಧ ಅಂತ್ಯವಾಗಿದ್ದು, ತುಮಕೂರಿನಲ್ಲಿ ಮುಂದುವರಿದಿದೆ. ಈ ಮಧ್ಯೆ ಪರಂ ಅವರಿಗೆ ‘ಆರ್ಡರ್’ ಒಂದು ಕಾಟ ಕೊಡುತ್ತಿದೆ.
ಹೌದು. ಪರಮೇಶ್ವರ್ ಅವರು ನೆಲಮಂಗಲ ಮೆಡಿಕಲ್ ಕಾಲೇಜಿಗೆ ಬರೋಬ್ಬರಿ 500 ಕೋಟಿ ರೂ. ಕೊಟ್ಟಿದ್ದಾರೆ. ಇದೀಗ ಈ 500 ಕೋಟಿಯ ಲೆಕ್ಕಕ್ಕಾಗಿ ಐಟಿ ಅಧಿಕಾರಿಗಳು ದುಂಬಾಲು ಬಿದ್ದಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಎಂಜಿನಿಯರಿಂಗ್ ಕಾಲೇಜುಗಳು ನಷ್ಟದಲ್ಲಿ ಇದೆ ಎಂದಿದ್ದೀರಿ. ಬೇರೊಂದು ಕಾಲೇಜಿನಿಂದ ಬಂದ ಹಣವನ್ನು ಇಲ್ಲಿ ಹಾಕಿಲ್ಲ. ಹಾಗಾದ್ರೆ ಹವಾಲಾ ಹಣದ ಮೂಲಕ ವ್ಯವಹಾರ ಮಾಡಿದ್ರಾ, 500 ಕೋಟಿ ಹಣ ಹೂಡಿಕೆಯ ಮೂಲ ಯಾವುದು ಎಂದು ಐಟಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ವಿದೇಶಿ ಕಂಪನಿಗಳಿಂದ ಸಾಮಾಗ್ರಿಗಳನ್ನು ಪಡೆಯಲು ಪರಮೇಶ್ವರ್ ಈಗಾಗಲೇ ಮುಂಗಡ ಹಣ ಪಾವತಿ ಮಾಡಿದ್ದಾರೆ. ಈಗ ಇದೇ ಅವರಿಗೆ ಕಂಟಕವಾಗಿ ಉಳಿದು ಬಿಟ್ಟಿದೆ.
ಎರಡು ದಿನಗಳ ಕಾಲ ಐಟಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದು, ಸಿಕ್ಕ ಸಂಪತ್ತು ನೋಡಿ ಶಾಕ್ ಗೆ ಒಳಗಾಗಿದ್ದಾರೆ. ಪರಮೇಶ್ವರ್ ಬರೋಬ್ಬರಿ 103 ಕೋಟಿ ಆಸ್ತಿಯನ್ನು ಬಹಿರಂಗಪಡಿಸಿಲ್ಲ. 100 ಕೋಟಿ ದಾಖಲೆ ಪತ್ರಗಳಿಗೆ ಉತ್ತರ ನೀಡಿಲ್ಲ. ಕಾಲೇಜಿನಲ್ಲಿ ದುಡಿದ ಹಣ ಪಂಚತಾರಾ ಹೋಟೆಲ್ ಮೇಲೆ ಹಾಗೂ ಕಾಲೇಜಿನ ಸಿಬ್ಬಂದಿಗೆ ಗೊತ್ತಾಗದ ರೀತಿಯಲ್ಲಿ ಅವರ ಹೆಸರಲ್ಲಿ 4.6 ಕೋಟಿ ಹೂಡಿಕೆ ಮಾಡಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ 89 ಲಕ್ಷ ರೂ., ನೆಲಮಂಗಲದ ಮನೆಯಲ್ಲಿ 1.8 ಕೋಟಿ ರೂ. ಹೀಗೆ ಪರಮೇಶ್ವರ್ ಗೆ ಸಂಬಂಧಿಸಿದ್ದ ಒಟ್ಟು 4.5 ಕೋಟಿ ರೂ. ನಗದು ದೊರಕಿದೆ. ಸಿದ್ದಾರ್ಥ ಶಿಕ್ಷಣ ಸಂಸ್ಥೆಯಿಂದ ಕೋಟಿ ಕೋಟಿ ತೆರಿಗೆ ವಂಚನೆ ಮಾಡಲಾಗಿದೆ. 2002 ರಿಂದಲೂ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ತೆರಿಗೆ ಕಟ್ಟಿಲ್ಲ. ಈ ಮೂಲಕ ಶಿಕ್ಷಣ ಸಂಸ್ಥೆ ಪಾಲಿಕೆಗೆ ಸುಮಾರು 2 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಪರಮೇಶ್ವರ್ ಅಣ್ಣನ ಮಗ ಆನಂದ್ ಸಿದ್ದಾರ್ಥ್ ಬಳಿ ಡೈರಿ ಪತ್ತೆಯಾಗಿದ್ದು, ಡೈರಿಯಲ್ಲಿ ಮೆಡಿಕಲ್ ಸೀಟು ಹಂಚಿಕೆ ಬಗ್ಗೆ ಉಲ್ಲೇಖ ಮಾಡಿರುವುದನ್ನು ಮಾಡಿದನ್ನು ಆದಾಯ ತೆರಿಗೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.