ಬೆಂಗಳೂರು: 2023ರ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ (Bengaluru) ಏರ್ ಶೋ ಆಯೋಜಿಸಲಾಗಿದ್ದು, ಪ್ರಧಾನಿ ಮೋದಿಯವರು (Narendra Modi) ಏರ್ ಶೋಗೆ (Air Show) ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಾಲಿನ್ಸ್ ಏರೋಸ್ಪೇಸ್ ಗ್ಲೋಬಲ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ನ್ನು ಉದ್ಘಾಟಿಸಿ ಮಾತನಾಡಿದರು. ಈ ಏರ್ ಶೋ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿರುವ ಏರೋಸ್ಪೇಸ್ ಸಂಶೋಧನಾ ಕೇಂದ್ರದ ಬಗ್ಗೆ, ವಿಮಾನಯಾನ, ವಿಮಾನ ಉತ್ಪಾದನಾ ರಂಗಗಳಲ್ಲಿನ ಅವಕಾಶಗಳು ಹಾಗೂ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಏರ್ ಶೋ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದೆ ಎಂದರು.
ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರ : ಭಾರತದ ಎಂಜಿನಿಯರ್ಗಳ ಸಾಮರ್ಥ್ಯ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಭಾಗಗಳನ್ನೂ ಒಳಗೊಂಡ ಸಂಪೂರ್ಣ ವಿಮಾನದ ಉತ್ಪಾದನೆಯನ್ನು ಬೆಂಗಳೂರಿನಲ್ಲಿಯೇ ಆಗಬೇಕೆಂಬುದು ನನ್ನ ಕನಸಾಗಿದೆ. ಏರೋಸ್ಪೇಸ್ ಕ್ಷೇತ್ರಕ್ಕೆ ಬೆಂಗಳೂರು ಉತ್ತಮ ಸ್ಥಳವಾಗಿದ್ದು, ಇಲ್ಲಿ ಡಿಆರ್ಡಿಒ, ಎನ್ಎಎಲ್, ಎಚ್ಎಎಲ್ನಂತಹ ಸಂಸ್ಥೆಗಳಿವೆ. ಬೆಂಗಳೂರಿನಲ್ಲಿ ಏರೋಸ್ಪೇಸ್, ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಸೆಮಿ ಕಂಡಕ್ಟರ್ಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿವೆ ಎಂದು ಹೇಳಿದರು.
ಶ್ರಮದ ಫಲ: ಕೊಲಿನ್ಸ್ ಏರೋಸ್ಪೇಸ್ ಎಂಜಿನಿಯರಿಂಗ್ ಸಂಸ್ಥೆಯನ್ನು ಆರಂಭಿಸಿದ್ದು ಸಂತಸವಾಗಿದೆ. ಈ ಸಂಸ್ಥೆ ಬೆಂಗಳೂರಿನಲ್ಲಿ 25 ವರ್ಷ ಪೂರೈಸಿದೆ. ಇದು ಸಂಸ್ಥೆಯ ಸಾಧನೆಯನ್ನು ತೋರಿಸುತ್ತದೆ. ಈ ಸಂಸ್ಥೆ ಬೆಂಗಳೂರಿನ ಪ್ರಮುಖ ಎಂಜಿನಿಯರಿಂಗ್ ಕೇಂದ್ರವಾಗಿದೆ ಇದು ನಿಮ್ಮ ಶ್ರಮದ ಫಲ. ಬೆಂಗಳೂರು, ಕರ್ನಾಟಕ, ಭಾರತ ಹೆಮ್ಮೆ ಪಡುವಂತೆ ಸಂಸ್ಥೆ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಏರೋಸ್ಪೇಸ್ ಅತ್ಯಂತ ವಿಶೇಷ ಇದು ಮನುಷ್ಯನನ್ನು ಮತ್ತೊಂದು ಲೋಕಕ್ಕೆ ತೆಗೆದುಕೊಂಡು ಹೋಗುತ್ತದೆ. ಮನುಷ್ಯನ ಮನಸ್ಸನ್ನು ಒಂದು ಹಂತದವರೆಗೆ ವಿಸ್ತರಣೆ ಮಾಡಬಹುದು. ಮನುಷ್ಯನ ಬುದ್ಧಿ ಶಕ್ತಿ ಶೇ. 80ರಷ್ಟು ಬಳಕೆಯಾಗುವುದಿಲ್ಲ. ಪರಮಹಂಸ ಅತ್ಯಂತ ಭಾರವಾದ ಮತ್ತು ಶುಭ್ರ ಪಕ್ಷಿ ಅದು ಅತಿ ಎತ್ತರದಲ್ಲಿ ಹಾರಬಹುದು. ಅದು ಮಾನಸ ಸರೋವರದಲ್ಲಿ ಇರುತ್ತದೆ. ಅದೇ ರೀತಿ ಏರೋಸ್ಪೇಸ್ ಅತ್ಯಂತ ಎತ್ತರದಲ್ಲಿ ಹಾರಬಹುದು. ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಕರೆಂಟ್ ಶಾಕ್ ಪ್ರಕರಣ – ಚಿಕಿತ್ಸೆ ಫಲಿಸದೇ ಮತ್ತೊಬ್ಬ ಬಾಲಕ ಸಾವು
ಈ ಸಂದರ್ಭದಲ್ಲಿ ಕಾಲಿನ್ಸ್ ಸಂಸ್ಥೆಯ ಅಧ್ಯಕ್ಷ ಸ್ಟೀಫನ್ ಟಿಮ್ಸ್ , ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಜನಾರ್ದನ್ ರೆಡ್ಡಿಗೆ ಬಿಗ್ ರಿಲೀಫ್ – ಒಂದೇ ದಿನ 4 ಪ್ರಕರಣಗಳಿಂದ ಮುಕ್ತಿ