ಆನೇಕಲ್: ಕಳೆದ ಕೆಲ ದಿನಗಳ ಹಿಂದಯಷ್ಟೇ ಬೆಂಗಳೂರಿನ ಸೋಮಸಂದ್ರ ಪಾಳ್ಯದಲ್ಲಿ ನಡೆದಿದ್ದ ಮ್ಯಾನ್ ಹೋಲ್ ದುರಂತ ಮಾಸುವ ಮುನ್ನವೇ ಮಂಗಳವಾರ ಚರಂಡಿ ನೀರನ್ನು ಶುಚಿಗೊಳಿಸಲು ಹೋಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಇಸಿಎಸ್ ಬಡಾವಣೆಯ ವಾಣಿಜ್ಯ ಕಟ್ಟಡದಲ್ಲಿ ಘಟನೆ ಸಂಭವಿಸಿದ್ದು, ರಾಯಚೂರು ಮೂಲದ ರಾಮು(35) ಹಾಗೂ ರವಿ(28)ಮೃತ ದುರ್ದೈವಿಗಳಾಗಿದ್ದಾರೆ.
ಇಂದು ಮಧ್ಯಾಹ್ನ ಯಮ್ ಲೋಕ್ ಹೋಟೆಲ್ ನ ಚರಂಡಿ ನೀರನ್ನು ಕ್ಲೀನ್ ಮಾಡಲು ವೇಳೆ ರಾಮು ಮ್ಯಾನ್ ಹೋಲ್ ಗೆ ಇಳಿದಿದ್ದಾರೆ. ಈ ವೇಳೆ ಅವರು ಉಸಿರು ಕಟ್ಟಿ ಸಹಾಯಕ್ಕೆ ಕೂಗಾಡಿದ್ದಾರೆ. ರಾಮು ಅವರನ್ನು ರಕ್ಷಣೆ ಮಾಡಲು ರವಿ ಕೂಡ ಒಳಗೆ ಇಳಿದಿದ್ದು ಈ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ.
ಈ ವಿಚಾರ ತಿಳಿದ ಸ್ಥಳೀಯರು ಹೆಚ್ಎಎಲ್ ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಪಡೆ ಹರಸಹಾಸ ಪಟ್ಟು ಶವವನ್ನು ಹೊರತೆಗೆದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಹೋಟೆಲ್ ಮಾಲೀಕ ಅವಿನಾಶ್ ಗುಪ್ತ, ಮ್ಯಾನೇಜರ್ ಆಯುಷ್ ಗುಪ್ತ, ಕಟ್ಟಡ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವೆಂಕಟೇಶ್ ವಿರುದ್ಧ ಎಚ್ಎಎಲ್ ಪೊಲೀಸರು ದೂರು ದಾಖಲಿಸಕೊಂಡಿದ್ದಾರೆ. ಮ್ಯಾನೇಜರ್ ಆಯುಷ್ ಗುಪ್ತ ಹಾಗೂ ವೆಂಕಟೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಜನವರಿ ಮೊದಲ ವಾರದಲ್ಲಿ ಸೋಮಸಂದ್ರಪಾಳ್ಯ ಮ್ಯಾನ್ಹೋಲ್ಗೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದರು. ಎನ್ ಡಿ ಸೆಫಲ್ ಅಪಾರ್ಟ್ ಮೆಂಟ್ ಬಳಿಯ ಒಳಚರಂಡಿ ನೀರು ಸಂಸ್ಕರಣಾ ಘಟಕ(ಎಸ್ ಟಿಪಿ)ಕ್ಕೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದರು.