– ಸಂದೇಹಗಳಿದ್ದರೆ ಸ್ಪಷ್ಟೀಕರಣ ಕೇಳಿ ಅಂದ್ರೆ ಭಾಷಣ ಮಾಡುತ್ತೀರಲ್ಲ
ಬೆಳಗಾವಿ: ಸಂದೇಹಗಳಿದ್ದರೆ ಸ್ಪಷ್ಟೀಕರಣ ಕೇಳಿ ಎಂದರೆ ಭಾಷಣ ಮಾಡುತ್ತೀರಲ್ಲ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ಗರಂ ಆದ ಪ್ರಸಂಗ ಇಂದು ನಡೆಯಿತು.
ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರು, ನೂರು ತಾಲೂಕು ಬರ ಅಂತಾ ಘೋಷಣೆ ಮಾಡಿದ್ದೀರಿ. ಆದರೆ ಅಲ್ಲಿ ಮೇವು ಬ್ಯಾಂಕ್ ತೆರೆದಿದ್ದೀರಾ ಹೇಳಿ? ಎಲ್ಲಿ ಗೋ ಶಾಲೆ ಆರಂಭಿಸಿದ್ದೀರಿ ಮಾಹಿತಿ ನೀಡಿ ಎಂದು ಅಸಮಾನಧಾನ ಹೊರಹಾಕಿದರು.
ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಸಲುವಾಗಿಯೇ ಎಲ್ಲ ಜಿಲ್ಲಾಧಿಕಾರಿಗಳಿಗೆ ತಲಾ 50 ಲಕ್ಷ ರೂ. ನೀಡಲಾಗಿದೆ. ಅಗತ್ಯವಾದರೆ ಇನ್ನೂ ಹೆಚ್ಚು ಹಣ ಬಿಡುಗಡೆಗೆ ಸಿದ್ಧ. ಖರ್ಚು ಮಾಡದೇ ಇದ್ದರೆ ಜಿಲ್ಲಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಬರಗಾಲದಲ್ಲಿ ಯಾವುದೇ ಭಾಗದ ಜನತೆ ಸಂಕಷ್ಟಕ್ಕೆ ಒಳಗಾಗಬಾರದು. ಎಲ್ಲಿ ತೊಂದರೆಯಾದರೂ ನಮ್ಮ ಗಮನಕ್ಕೆ ತನ್ನಿ ತಕ್ಷಣ ಕ್ರಮಕೈಗೊಳ್ಳುತ್ತೇವೆ. ಬರ ಪರಿಹಾರ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ಸಹ ನೀಡಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
ಹೊನ್ನಾಳಿ ಕ್ಷೇತ್ರದಲ್ಲಿ ಬರಗಾಲ ಕುರಿತಾಗಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಲು ಆರಂಭಿಸಿದರು. ತಕ್ಷವೇ ಪ್ರತಿಕ್ರಿಯೆ ಸ್ಪೀಕರ್ ರಮೇಶ್ ಕುಮಾರ್ ಅವರು, ಸಂದೇಹಗಳಿದ್ದರೆ ಸ್ಪಷ್ಟೀಕರಣ ಕೇಳಿ ಎಂದರೆ ಭಾಷಣ ಮಾಡುತ್ತೀರಲ್ಲ. ಈ ಸದನದಲ್ಲಿ ಎಲ್ಲ ಸದಸ್ಯರು ಸಮಾನರು. ಸದನವನ್ನು ಹೇಗೆ ನಡೆಸಬೇಕು ಎನ್ನುವುದು ನನಗೆ ಗೊತ್ತಿದೆ. ನನ್ನನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಸಭಾಪತಿ ಸ್ಥಾನವನ್ನು ಮರೆತು ವಾಗ್ವಾದಕ್ಕೆ ನಾನು ಸಿದ್ಧನಿಲ್ಲ ಎಂದು ಕಿಡಿಕಾರಿದರು.
ಸ್ಪೀಕರ್ ಕೋಪಗೊಳ್ಳುತ್ತಿದ್ದಂತೆ ಶಾಸಕ ರೇಣುಕಾಚಾರ್ಯ ಅವರು ತಪ್ಪೊಪ್ಪಿಕೊಂಡರು. ನನಗೆ ಅನುಭವ ಕಡಿಮೆ, ನೀವು ಮಾರ್ಗದರ್ಶನ ಮಾಡಿ. ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶಕೊಡಿ. ಮುಜುಗರ ಮಾಡಬೇಡಿ ಎಂದು ಕೇಳಿಕೊಂಡರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್, ಮುಂದಿನ ಹಂತದಲ್ಲಿ ಒಂದು ಪಕ್ಷದಿಂದ ಕೇವಲ ಐವರಿಗೆ ಮಾತ್ರ ಸ್ಪಷ್ಟೀಕರಣ ಕೇಳಲು ಅವಕಾಶ ನೀಡಲಾಗುತ್ತದೆ. ರಾತ್ರಿ ಇಡೀ ಸದನ ನಡೆಸಲು ಸಾಧ್ಯವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv