ಎಚ್.ವಿಶ್ವನಾಥ್ ನನ್ನ ಗುರು, ಸಿದ್ದರಾಮಯ್ಯ ನಮ್ಮ ಜೂನಿಯರ್: ರಮೇಶ್ ಜಾರಕಿಹೊಳಿ

1 Min Read

ಬೆಳಗಾವಿ: ಎಚ್.ವಿಶ್ವನಾಥ್ ನನ್ನ ಗುರು, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ನಮ್ಮ ಜೂನಿಯರ್ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಖನ್ ಜಾರಕಿಹೊಳಿ ಇಂದಿನಿಂದ ನನ್ನ ತಮ್ಮ ಅಲ್ಲ. ಆತ ನನ್ನ ವಿರೋಧಿ. ಡಿಸೆಂಬರ್ 5ರವರೆಗೂ ಅವನು ನನ್ನ ತಮ್ಮ ಅಲ್ಲ 5 ರ ನಂತರ ತಮ್ಮ. ಲಖನ್‍ಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಹೇಳಿದರು.

ಇದೇ ವೇಳೆ ರಮೇಶ್ ಜಾರಕಿಹೊಳಿ ನನ್ನ ಶಿಷ್ಯ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿರುವುದು ಸತ್ಯವಿದೆ. ಎಚ್.ವಿಶ್ವನಾಥ್ ನನ್ನ ಗುರು, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ನಮ್ಮ ಜೂನಿಯರ್. ಬ್ರಿಟಿಷ್ ಅವರು ಕುತಂತ್ರ ಮಾಡಿದ ಹಾಗೆ ಕಾಂಗ್ರೆಸ್‍ನವರು ಮಾಡಿದ್ದಾರೆ. ಸತೀಶ್ ಕುತಂತ್ರ ಮಾಡಿದ ಲಖನ್ ನನ್ನ ಬೆನ್ನಿಗೆ ಚೂರಿ ಹಾಕಿದ ಎಂದು ಇಬ್ಬರು ಸಹೋದರರ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದರು.

ಒಂದೇ ವಿಮಾನದಲ್ಲಿ ಬಂದರೂ ಸಹೋದರರಿಬ್ಬರು ಯಾಕೆ ಮಾತನಾಡಲಿಲ್ಲ ಎಂದು ಕೇಳಿದಾಗ, ಇಬ್ಬರು ವಿಮಾನದಲ್ಲಿ ಬಂದಿರುವುದು ಸಹಜ. ಆದರೆ ಸತೀಶ್ ಜೊತೆಗೆ ನಾನು ಮಾತನಾಡಿಲ್ಲ. ಆತನ ಜೊತೆ ನಾನು ನಲವತ್ತು ವರ್ಷದಿಂದ ಮಾತಾಡಿಲ್ಲ ಮುಂದೆಯೂ ಮಾತನಾಡುವುದಿಲ್ಲ. ಲಖನ್ ಜಾರಕಿಹೊಳಿ ನನಗೆ ಬೆನ್ನಿಗೆ ಚೂರಿ ಹಾಕಿದ್ದಾನೆ. ಸತೀಶ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *