ಮುಂಬೈ: ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಬಲವಂತವಾಗಿ ಬಿಸಿಸಿಐ ಕೆಳಗಿಳಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಟೀಂ ಇಂಡಿಯಾದ ಮೂರು ಮಾದರಿಯ ಕ್ರಿಕೆಟ್ ತಂಡಕ್ಕೂ ವಿರಾಟ್ ಕೊಹ್ಲಿಯನ್ನು ಸಾರಥಿಯನ್ನಾಗಿ ಬಿಸಿಸಿಐ ನೇಮಿಸಿತು. ಕೊಹ್ಲಿ ಕೂಡ ನಾಯಕತ್ವವನ್ನು ಯಶಸ್ವಿಯಾಗಿ ನಿಭಾಯಿಸಿ ಹಲವು ಸರಣಿಗಳನ್ನು ಗೆದ್ದರು. ಆದರೆ ಪ್ರತಿಷ್ಠಿತ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಕೊಹ್ಲಿ ನಾಯಕತ್ವದಲ್ಲಿ ಪ್ರಶಸ್ತಿ ಜಯಿಸಲು ಭಾರತ ತಂಡ ವಿಫಲವಾಗಿತ್ತು. ಹಾಗಾಗಿ ಐಪಿಎಲ್ನಲ್ಲಿ ನಾಯಕನಾಗಿ ಯಶಸ್ಸಿನ ಉತ್ತುಂಗದಲ್ಲಿದ್ದ ರೋಹಿತ್ ಶರ್ಮಾರನ್ನು ನಾಯಕನಾಗಿ ನೇಮಿಸಬೇಕೆಂಬ ಕೂಗು ಪದೆ ಪದೇ ಕೇಳಿಬರುತ್ತಿತ್ತು. ಆದರೆ ಇದಕ್ಕೆ ಬಿಸಿಸಿಐ ಒಪ್ಪಿರಲಿಲ್ಲ. ಇದನ್ನೂ ಓದಿ: ಟೀಂ ಇಂಡಿಯಾ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕ – ನಾಯಕತ್ವ ಕಳೆದುಕೊಂಡ ಕೊಹ್ಲಿ
ಇದೀಗ ಕಡೆಗೂ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ವೈಟ್ ಬಾಲ್ ಕ್ರಿಕೆಟ್ನ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ಗೆ ಪಟ್ಟ ಕಟ್ಟಿದೆ. ಈ ಮೊದಲು ವಿರಾಟ್ ಕೊಹ್ಲಿ ಬಳಿ ಗೌರವಯುತವಾಗಿ ನಾಯಕತ್ವದಿಂದ ಕೆಳಗಿಳಿಯುವಂತೆ ಬಿಸಿಸಿಐ ಮನವಿ ಮಾಡಿಕೊಂಡಿತ್ತು. ಅಲ್ಲದೇ ಸ್ವಯಂ ಪ್ರೇರಿತವಾಗಿ 48 ಗಂಟೆಗಳ ಒಳಗಾಗಿ ನಾಯಕತ್ವ ತೊರೆಯಲು ವಿರಾಟ್ ಬಳಿ ಬಿಸಿಸಿಐ ಮನವಿ ಮಾಡಿಕೊಂಡಿತ್ತು. ಆದರೆ ಕೊಹ್ಲಿ ಮಾತ್ರ ಇದ್ದಕ್ಕೆ ಒಪ್ಪದೆ ನಾಯಕತ್ವದಲ್ಲಿ ಮುಂದುವರಿಯುವ ಬಗ್ಗೆ ಇಚ್ಚಿಸಿದ್ದರು. ಇದನ್ನು ಒಪ್ಪದ ಬಿಸಿಸಿಐ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡುತ್ತಿದ್ದಂತೆ ನಾಯಕತ್ವದ ಬದಲಾವಣೆಯನ್ನು ಮಾಡಿ ಕೊಹ್ಲಿಯನ್ನು ಬಲವಂತವಾಗಿ ಕೆಳಗಿಳಿಸಿದೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ತಂಡಕ್ಕೆ ಗೆಲುವಿನ ಶ್ರೇಯಸ್ಸು ದೊರೆಯಬೇಕು: ರಾಹುಲ್ ದ್ರಾವಿಡ್
ವಿರಾಟ್ ಕೊಹ್ಲಿ 2023ರ ಏಕದಿನ ವಿಶ್ವಕಪ್ ವರೆಗೆ ನಾಯಕನಾಗಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದರು. ಹಾಗಾಗಿ ನಾಯಕತ್ವ ತ್ಯಜಿಸಲು ಬಿಸಿಸಿಐ ಸೂಚಿಸಿದಾಗ ನಿರಾಕರಿಸಿದ್ದರು. ಆದರೆ ಇದೀಗ ಬಿಸಿಸಿಐ ತನ್ನ ಪಟ್ಟುಬಿಡದೆ ಕೊಹ್ಲಿಯನ್ನು ಕೆಳಗಿಳಿಸಿದೆ ನೂತನ ನಾಯಕನಾಗಿ ರೋಹಿತ್ ಶರ್ಮಾರನ್ನು ಆಯ್ಕೆ ಮಾಡಿದೆ.