ಬೆಂಗಳೂರು: ಶುಕ್ರವಾರ ತಾನೇ ಶಿವರಾತ್ರಿ ಮುಗಿದಿದೆ. ಶಿವರಾತ್ರಿ ದಿನವೇ ಶಿವನ ಭಕ್ತರಿಗೆ ಬಿಬಿಎಂಪಿ ಶಾಕ್ ನೀಡಿದೆ. ಬೆಂಗಳೂರಿನಲ್ಲಿರುವ ಪ್ರಮುಖ ಶಿವನ ದೇವಸ್ಥಾನವನ್ನು ತೆರವು ಮಾಡಲು ಮುಂದಾಗಿದೆ.
ಜಯನಗರದ 4ನೇ ಬಡಾವಣೆಯ ರಸ್ತೆ ಪಕ್ಕದಲ್ಲೆ ದೇವಸ್ಥಾನ ಇದ್ದು, ಅದನ್ನು ಕೆಡವಲು ಕೋರ್ಟ್ ಆದೇಶ ಮಾಡಿದೆ ಎಂದು ಸುಳ್ಳು ಆದೇಶ ಕಾಫಿಯನ್ನು ತೋರಿಸಿ ದೇವಸ್ಥಾನ ಕೆಡವಲು ಮುಂದಾಗಿದ್ದಾರೆ ಎಂದು ಭಕ್ತರು ಗರಂ ಆಗಿದ್ದಾರೆ.
ದೇವಸ್ಥಾನದ ಪಕ್ಕದಲ್ಲಿರುವ ಸನಾತನ ಕಲಾ ಕೇತ್ರ ಸಂಸ್ಥೆಯ ರಂಗನಾಥ್ ಎಂಬವರು ದೇವಸ್ಥಾನ ತೆರವು ಮಾಡಲು ಹೈಕೋರ್ಟ್ ಅಲ್ಲಿ ಅರ್ಜಿ ಹಾಕಿದ್ದು, ದೇವಸ್ಥಾನವನ್ನು ತೆರವು ಮಾಡಿದ್ದೀರಾ? ಎಂದು ಮಾರ್ಚ್ 4ರಂದು ಬಿಬಿಎಂಪಿಗೆ ಮಾಹಿತಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಆದರೆ ಬಿಬಿಎಂಪಿ ಇಂಜಿನಿಯರ್ ಪ್ರಸನ್ನ ಎಂಬವರು ಕೋರ್ಟ್ ಆದೇಶ ಇದೆ ಎಂದು ತಪ್ಪು ಮಾಹಿತಿ ನೀಡಿ ಇದೇ ತಿಂಗಳ 28ರಂದು ದೇವಸ್ಥಾನ ಕೆಡವಲು ಮುಂದಾಗಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿವೆ.
ಹೀಗಾಗಿ ಭಕ್ತರು ಸೋಮವಾರ ದೇವಸ್ಥಾನದ ಮುಂದೆ ಬೃಹತ್ ಪ್ತತಿಭಟನೆ ಕೈಗೊಂಡಿದ್ದು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. 175 ವರ್ಷಗಳಿಂದ ಈ ದೇವಸ್ಥಾನ ಇದ್ದು ಜಯನಗರ ನಿವಾಸಿಗಳು ಪೂಜೆ ಪುರಸ್ಕಾರ ಮಾಡುತ್ತಿದ್ದಾರೆ. ಈ ದೇವರಿಗೆ ಅಪಾರ ಭಕ್ತಗಣವೇ ಇದೇ. ಏಕಾಏಕಿ ದೇವಸ್ಥಾನ ಕೆಡವಲು ಮುಂದಾಗಿರುವುದಕ್ಕೆ ರೊಚ್ಚಿಗೆದ್ದಿದ್ದು, ದೇವಸ್ಥಾನವನ್ನು ಕೆಡವದೇ ಹಾಗೇ ಬಿಟ್ಟು ಅದನ್ನು ಅಭಿವೃದ್ಧಿ ಮಾಡಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.