ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನ ಹಾಗೂ ಜೆಡಿಎಸ್ ಪಕ್ಷಕ್ಕೆ ಬಸವರಾಜ ಹೊರಟ್ಟಿ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಮಂಗಳವಾರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಇವತ್ತಿನ ಕಲುಷಿತ ರಾಜಕಾರಣ ನಮ್ಮಂಥವರಿಗೆ ಅಲ್ಲ. ರಾಜಕಾರಣ ಡ್ರಗ್ ಆಡಿಕ್ಟ್ ಥರಾ, ಏನ್ ಮಾಡಬಹುದು ಎಂದು ಪ್ರಶ್ನಿಸಿದರಲ್ಲದೇ, ನಾನು ಸಭಾಪತಿ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ರಾಜರ ಆಳ್ವಿಕೆಯಲ್ಲಿ ಹಿಂದೂ ದೇವಾಲಯದ ಮೇಲೆ ಮಸೀದಿ ಕಟ್ಟಿದ್ದಾರೆ: ಸಿ.ಟಿ.ರವಿ
ನನ್ನ ಭವಿಷ್ಯದ ಬಗ್ಗೆ ಯಾರೂ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಸಾಮಾನ್ಯ ಮನೆತನದಲ್ಲಿ ಹುಟ್ಟಿ ಸಾಮಾನ್ಯ ಶಿಕ್ಷಕನಾಗಿ ಇಷ್ಟು ದೊಡ್ಡ ಸ್ಥಾನ ಅನುಭವಿಸಿದ್ದೇನೆ. ಸಚಿವ ಸ್ಥಾನ ಸಿಕ್ಕಿಲ್ಲ ಅಂತ ಒಂದು ದಿವಸವೂ ನಾನು ಮಾತನಾಡಿಲ್ಲ. ಕೆಲವೊಂದು ಬಾರಿ ಅನಿವಾರ್ಯವಾಗಿ ತೀರ್ಮಾನ ಮಾಡಬೇಕಾಗುತ್ತದೆ. ದೇವೇಗೌಡರ ಕುಟುಂಬದ ಬಗ್ಗೆ ನನಗೆ ಬೇಸರ ಪಡುವಂತಹ ಘಟನೆ ಎಂದೂ ಆಗಿಲ್ಲ. ಮಂತ್ರಿ ಆದಾಗಲೂ ಇಲ್ಲದಿದ್ದಾಗಲೂ ನಾನು ಅವರ ಜೊತೆಗೆ ಇದ್ದೆ. ದೇವೇಗೌಡರ ಬಗ್ಗೆಯಾಗಲಿ ಉಳಿದವರ ಬಗ್ಗೆಯಾಗಲಿ ನನಗೆ ಅಸಮಾಧಾನ ಇಲ್ಲ. ದೇವೇಗೌಡರಿಗೆ ನಾನು ವಿವರವಾಗಿ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.
ಜೆಡಿಎಸ್ ವರಿಷ್ಠರ ಉಪಕಾರ ಸ್ಮರಣೆ ಮಾಡುತ್ತೇನೆ. ಆಕಸ್ಮಿಕವಾಗಿ ಕೆಲವೊಮ್ಮೆ ಬದಲಾವಣೆಗಳು ತನ್ನಷ್ಟಕ್ಕೆ ತಾನೇ ಆಗುತ್ತವೆ. ಆತ್ಮೀಯರು ಹಾಗೂ ಶಿಕ್ಷಕರ ಒತ್ತಾಯವೂ ಇತ್ತು. ರಾಷ್ಟ್ರದಲ್ಲಿ ಯಾವ ಪಕ್ಷ ಜಾತಿ ಬಿಟ್ಟು ಇದ್ದಾವೆ ಹೇಳಿ? ಎಲ್ಲ ಪಕ್ಷದಲ್ಲೂ ಮೊದಲು ಯಾವ ಜಾತಿ, ಎಷ್ಟು ಖರ್ಚು ಮಾಡ್ತಿಯಾ ಅಂತ ಕೇಳ್ತಾರೆ. ಇದುವರೆಗೆ ಒಬ್ಬರನ್ನು ಬಿಟ್ಟು ಯಾರೂ ನಾನು ಬಿಜೆಪಿ ಸೇರುವುದನ್ನು ವಿರೋಧ ಮಾಡಿಲ್ಲ. ಸ್ವತಂತ್ರವಾಗಿ ಆರಿಸಿ ಬಂದಾಗ ಯಾವುದಾದರೂ ಪಕ್ಷದ ಆಸರೆ ಬೇಕಾಗುತ್ತದೆ. 42 ವರ್ಷದ ರಾಜಕೀಯ ಜೀವನದಲ್ಲಿ ಇದು ಮೊಟ್ಟ ಮೊದಲ ಬಾರಿಗೆ ಹೀಗಾಗಿದೆ. ಎಲ್ಲ ಅಧಿಕಾರ ಅನುಭವಿಸಿದ್ದೀನಿ. ಈಗಲೂ ಎಂಎಲ್ಸಿ ಆಗ್ತೀನಿ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಗೀತೆ ಕಡ್ಡಾಯ ಮಾಡಿದ್ರೆ ನಮಗೂ ಖುಷಿಯೇ: ಜಮೀರ್
ಇವತ್ತಿನ ಸ್ಥಿತಿ ನೋಡಿದರೆ ರಾಜಕಾರಣದಲ್ಲಿ ಇರುವುದು ಒಳ್ಳೆಯದಲ್ಲ. ಆದರೆ ನಮಗೆಲ್ಲ ಡ್ರಗ್ ಅಡಿಕ್ಟ್ ಥರ ರಾಜಕೀಯ. ಇವತ್ತಿನ ಕಲುಷಿತ ರಾಜಕೀಯದಲ್ಲಿ ಜನರೂ ಹಾಗೆಯೇ ಆಗಿದ್ದಾರೆ, ನಾವೂ ಹಾಗೆಯೇ ಆಗಿದ್ದೇವೆ. ವ್ಯವಸ್ಥೆಯಲ್ಲಿ ಮನಸ್ಸು ಇರುತ್ತದೆಯೋ ಬಿಡುತ್ತದೆಯೋ ನಾವು ಇರಬೇಕಾಗುತ್ತದೆ ಎಂದು ಹೇಳಿದ್ದಾರೆ.