ಹೈದರಾಬಾದ್: ಸಂಕ್ರಾಂತಿಯ ಹಿನ್ನೆಲೆಯಲ್ಲಿ ಹಾರಿಸುತ್ತಿದ್ದ ಗಾಳಿಪಟದ ನಿಷೇಧಿತ ಗಾಜು (ಮಾಂಜಾ) ಲೇಪಿತ ದಾರ ಬೈಕ್ ಸವಾರನ ಕತ್ತು ಸೀಳಿರುವ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದಿದೆ.
ಅಮನ್ ಪತ್ನಿಯೊಂದಿಗೆ ಶನಿವಾರ ಸಂಬಂಧಿಕರನ್ನು ಭೇಟಿಯಾಗಲು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಗಾಳಿಪಟದ ದಾರ ಅಮನ್ನ ಕತ್ತಿಗೆ ಸಿಲುಕಿ ಬಿಗಿದುಕೊಂಡಿದೆ. ಪರಿಣಾಮವಾಗಿ ಆತನ ಕತ್ತು ಸೀಳಿಕೊಂಡಿದೆ. ತೀವ್ರ ರಕ್ತ ಸ್ರಾವವಾದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪತ್ನಿ, ಅಮನ್ನನ್ನು ದಾರದಿಂದ ಬಿಡಿಸಲು ಪ್ರಯತ್ನಿಸಿದ್ದಾಳೆ. ಇದರಿಂದ ಆಕೆಗೂ ಗಾಯಗಳಾಗಿವೆ. ಆದರೆ ಅಮನ್ನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಅಮನ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಗಾಳಿಪಟ ಹಾರಿಸುವಾಗ ಬಿದ್ದು ಒಂದೇ ದಿನ 63ಕ್ಕೂ ಹೆಚ್ಚು ಮಂದಿಗೆ ಗಾಯ
ಗಾಳಿಪಟಗಳಲ್ಲಿ ನೈಲಾನ್ ದಾರಗಳ ಸಂಪೂರ್ಣ ನಿಷೇಧ:
ದೇಶದಲ್ಲಿ ಗಾಳಿಪಟಗಳಲ್ಲಿ ನೈಲಾನ್ ಅಥವಾ ಸಿಂಥೆಟಿಕ್ ದಾರಗಳನ್ನು ಬಳಸುವುದು ಸಂಪೂರ್ಣ ನಿಷೇಧಿಸಲಾಗಿದೆ. ಇವುಗಳಿಂದ ಪ್ರಾಣಿ-ಪಕ್ಷಿಗಳಿಗೆ ಮಾರಣಾಂತಿಕ ಹಾನಿ ಉಂಟಾಗುತ್ತದೆ ಎಂಬ ಕಾರಣಕ್ಕೆ ಮಾಂಜಾವನ್ನು ಸಂಗ್ರಹಿಸುವುದು, ಬಳಕೆ ಮಾಡುವುದು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ತಂತಿ ಮಾರಾಟ, ಸಂಗ್ರಹಣೆ ನಿಷೇಧ