ಬಾಗಲಕೋಟೆ: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು, ವ್ಯಾಪಾರಿಗಳ ಕಷ್ಟ ಆಲಿಸಿ, ಚೌಕಾಸಿ ಮಾಡದೆ ರಸ್ತೆ ಬದಿ ತರಕಾರಿ ಖರೀದಿಸಿ ಸರಳತೆ ತೋರಿದ್ದಾರೆ.
ಭಾನುವಾರ ಮುಂಜಾನೆ ಜಮಖಂಡಿಯ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಗೆ ಬಂದ ಸುಧಾಮೂರ್ತಿ ಅವರು, ವ್ಯಾಪಾರಿಗಳನ್ನು ಮಾತನಾಡಿಸಿ ಅವರ ಕಷ್ಟಗಳನ್ನು ಆಲಿಸಿ ಸಾಮಾನ್ಯರಂತೆ ಕೈಯಲ್ಲಿ ಚೀಲ ಹಿಡಿದು ತರಕಾರಿ ಕೊಂಡು ಸರಳತೆ ಮೆರೆದಿದ್ದಾರೆ.
ಸುಧಾಮೂರ್ತಿಯವರು ಜಮಖಂಡಿ ತಾಲೂಕಿನಲ್ಲಿರುವ ತಮ್ಮ ಮನೆದೇವರು ಶೂರ್ಪಾಲಿಯ ಲಕ್ಷ್ಮಿನರಸಿಂಹ ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಜಮಖಂಡಿಗೆ ಬಂದಿದ್ದರು. ಈ ವೇಳೆ ಜಮಖಂಡಿಯ ಕುಂಚನೂರು ರಸ್ತೆಯ ಕೆಎಚ್ಬಿ ಕಾಲೊನಿ ದಾನಮ್ಮನ ಗುಡಿಯಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಸುಧಾಮೂರ್ತಿಯವರು ಉಳಿದುಕೊಂಡಿದ್ದರು. ಈ ವೇಳೆ ಕೃಷ್ಣಾ ನದಿ ಪ್ರವಾಹದಿಂದ ಬಳಲಿದ್ದ ರೈತರನ್ನು ಮಾತನಾಡಿಸಲು ಸ್ವತಃ ಅವರೇ ಮಾರುಕಟ್ಟೆಗೆ ಬಂದಿದ್ದರು ಎನ್ನಲಾಗಿದೆ.
ಭಾನುವಾರ ಮುಂಜಾನೆಯೇ ಎದ್ದು, ಕೈಯಲ್ಲಿ ಚೀಲವನ್ನು ಹಿಡಿದು ತರಕಾರಿಯನ್ನು ಖರೀದಿ ಮಾಡಿದ್ದಾರೆ. ಇದರ ಜೊತೆಗೆ ಅಲ್ಲಿನ ರಸ್ತೆಬದಿಯ ವ್ಯಾಪಾರಿಗಳನ್ನು ಮಾತನಾಡಿಸಿ ಅವರ ಕಷ್ಟಗಳನ್ನು ಆಲಿಸಿದ್ದಾರೆ. ನಂತರ ಅವರ ಬಳಿಯೇ ಚೌಕಸಿ ಮಾಡದೆ ತರಕಾರಿಯನ್ನು ಖರೀದಿಸಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.