ಬಾಗಲಕೋಟೆ: ಕುಡಿದ ನಶೆಯಲ್ಲಿ ಜಗಳವಾಡಿ ವ್ಯಕ್ತಿಯೋರ್ವ ಕ್ಷುಲ್ಲಕ ಕಾರಣಕ್ಕಾಗಿ ಕಲ್ಲಿನಿಂದ ಜಜ್ಜಿ ವೃದ್ಧನ ಕೊಲೆ ಮಾಡಿರುವ ಭೀಕರ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಕಟ್ಟಿಗೆ ಅಡ್ಡೆಯಲ್ಲಿ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದ ನಾಗಪ್ಪ ಅಂಬಿಗೇರ(60) ಕೊಲೆಯಾದ ವ್ಯಕ್ತಿ. ಆರೋಪಿಯನ್ನು ಶಂಕರ್ ಎಂದು ಗುರುತಿಸಲಾಗಿದೆ. ನಗರದ ಹಳೆ ಬಸ್ ನಿಲ್ದಾಣದ ಹಿಂಬದಿಯ ಬುರ್ಲಿ ಕಾಂಪ್ಲೆಕ್ಸ್ ಆವರಣದಲ್ಲಿ ಈ ಘಟನೆ ನಡೆದಿದೆ. ರಾತ್ರಿ ಕುಡಿದ ಅಮಲಿನಲ್ಲಿ ಶಂಕರ್ ಹಾಗೂ ನಾಗಪ್ಪ ಮಧ್ಯೆ ಜಗಳ ನಡೆದಿತ್ತು. ಕುಡಿದ ಅಮಲಿನಲ್ಲಿ ಇಬ್ಬರು ಕೈ, ಕೈ ಮಿಲಾಯಿಸಿದ್ದರು. ಕೊನೆಗೆ ಕ್ಷುಲ್ಲಕ ಕಾರಣಕ್ಕೆ ವಾದ ವಿವಾದ ನಡೆದು, ಶಂಕರ್ ನಾಗಪ್ಪನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆ ನಡೆದ ಸ್ಥಳದಿಂದ ನಾಗಪ್ಪ ಶವವನ್ನ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿದ ಬಳಿಕ ಶವವನ್ನು ಆರೋಪಿ ಎಳೆದು ತಂದು ದೂರ ಬಿಸಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬಾಗಲಕೊಟೆ ಶಹರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಶಂಕರ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಾಗಪ್ಪನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.