ಬೆಂಗಳೂರು: ಹಾಡುಗಳು ಗೆದ್ದರೆ ಸಿನಿಮಾ ಕೂಡಾ ಗೆದ್ದೇ ಗೆಲ್ಲುತ್ತದೆ ಅನ್ನೋದು ಗಾಂಧಿನಗರದಲ್ಲಿ ಬೇರು ಬಿಟ್ಟಿರೋ ಹಳೇ ನಂಬಿಕೆ. ಅದರ ಬೇರುಗಳು ಗಟ್ಟಿಯಾಗಿವೆ. ಯಾಕೆಂದರೆ ಈ ನಂಬಿಕೆಗೆ ಪುಷ್ಠಿ ನೀಡುವಂಥಾ ಹತ್ತಾರು ಉದಾಹರಣೆಗಳಿದ್ದಾವೆ. ಆ ನಿಟ್ಟಿನಲ್ಲಿ ನೋಡ ಹೋದರೆ ಬದ್ರಿ ವರ್ಸಸ್ ಮಧುಮತಿ ಎಂಬ ರೊಮ್ಯಾಂಟಿಕ್ ಆಕ್ಷನ್ ಚಿತ್ರ ಮ್ಯೂಸಿಕಲ್ ಹಿಟ್ ಆಗೋ ಸ್ಪಷ್ಟ ಲಕ್ಷಣಗಳೇ ಕಾಣಿಸುತ್ತಿವೆ.
ಈ ಸಿನಿಮಾಗೆ ಎಲ್ವಿನ್ ಜೋಶ್ವಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಜಯಂತ್ ಕಾಯ್ಕಿಣಿಯವರು ಆ ಮೂರೂ ಹಾಡುಗಳನ್ನು ಬರೆದಿದ್ದಾರೆ. ಅವರು ಮೂರು ಹಾಡು ಬರೆದಿದ್ದಾರೆಂಬುದರಲ್ಲಿಯೂ ಒಂದು ಗೆಲುವಿನ ಲಿಂಕ್ ಇದೆ!
ಸಾಮಾನ್ಯವಾಗಿ ಇಷ್ಟವಾಗದಿದ್ದರೆ ಕಾಯ್ಕಿಣಿಯವರು ಒಂದಕ್ಕಿಂತ ಹೆಚ್ಚು ಹಾಡು ಬರೆಯೋದಿಲ್ಲ. ಒಂದು ಸಿನಿಮಾಗೆ ಒಂದೇ ಹಾಡೆಂಬುದು ಅವರೇ ಕಾಯ್ದುಕೊಂಡು ಬಂದಿರೋ ಸೂತ್ರ. ಆದರೆ ಅವರು ಈ ಹಿಂದೆ ಮುಂಗಾರು ಮಳೆ ಚಿತ್ರಕ್ಕೆ ಮಾತ್ರವೇ ಮೂರು ಹಾಡುಗಳನ್ನು ಬರೆದಿದ್ದರು. ಅದಾದ ನಂತರ ಅವರು ಮೂರು ಹಾಡುಗಳನ್ನು ಬರೆದಿರೋದು ಬದ್ರಿ ವರ್ಸಸ್ ಮಧುಮತಿ ಚಿತ್ರಕ್ಕೆ ಮಾತ್ರ!
ಜಯಂತ್ ಕಾಯ್ಕಿಣಿಯವರು ಮೂರು ಹಾಡು ಬರೆದಿದ್ದಲ್ಲದೆ ಚಿತ್ರವನ್ನೂ ಮೆಚ್ಚಿಕೊಂಡಿದ್ದಾರಂತೆ. ಈಗ ಈ ಮೂರೂ ಹಾಡುಗಳೂ ಹಿಟ್ ಆಗಿವೆ. ಅರ್ಮಾನ್ ಮಲಿಕ್, ವಿಜಯ್ ಜೇಸುದಾಸ್ ಹಾಡಿರೋ ಹಾಡುಗಳಂತೂ ಲಕ್ಷ ಲಕ್ಷ ವೀಕ್ಷಣೆ ಪಡೆಯುತ್ತಾ ಮುನ್ನುಗ್ಗುತ್ತಿವೆ. ಇದೆಲ್ಲವೂ ಮುಂಗಾರು ಮಳೆ ಚಿತ್ರದ ಅಗಾಧ ಗೆಲುವಿನ ಇತಿಹಾಸ ಮತ್ತೆ ಪುನರಾವರ್ತನೆಯಾಗೋ ಸೂಚನೆಯಂತೆಯೇ ಭಾಸವಾಗುತ್ತಿದೆ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv