ಚಿಕ್ಕಬಳ್ಳಾಪುರ: ನಿಗದಿತ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ಲಿಸದ ಕಾರಣ ಆಕ್ರೋಶಗೊಂಡ ಇಬ್ಬರು ಪ್ರಯಾಣಿಕರು ತಮ್ಮ ಸ್ನೇಹಿತರನ್ನು ಕರೆಸಿ ನಿರ್ವಾಹಕ ಹಾಗೂ ಚಾಲಕನ ಮೇಲೆ ಗಂಭೀರ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಜಿಲ್ಲೆಯ ಗೌರಿಬಿದನೂರು ಕೆಎಸ್ಆರ್ಟಿಸಿ ಡಿಪೋ ಎದುರಲ್ಲೇ ಈ ಘಟನೆ ನಡೆದಿದ್ದು, ಕೆ.ಎ.40 ಎಫ್ 453 ಬಸ್ ಮಂಚೇನಹಳ್ಳಿ ಕಡೆಯಿಂದ ಗೌರಿಬಿದನೂರು ಕಡೆಗೆ ಬರುತ್ತಿತ್ತು. ಬಸ್ ನಲ್ಲಿ ರಫೀಕ್ ಹಾಗೂ ಶಫಿ ಎನ್ನುವವರು ಹಿರೇಬಿದನೂರಿನಲ್ಲಿ ಬಸ್ ನಿಲ್ಲಿಸುವಂತೆ ಕೇಳಿದ್ದಾರೆ ಬಸ್ ನಿಲ್ಲಿಸುವಷ್ಟರಲ್ಲಿ ಸ್ವಲ್ಪ ದೂರ ಬಂದಿದೆ.
ಇದರಿಂದ ಆಕ್ರೋಶಗೊಂಡ ಇಬ್ಬರು ಪ್ರಯಾಣಿಕರಾದ ರಫೀಕ್ ಹಾಗೂ ಶಫಿ ಬಸ್ ನಿರ್ವಾಹಕ ಹರೀಶ್ ಹಾಗೂ ಚಾಲಕ ವೆಂಕಟೇಶ್ ಜೊತೆ ಕ್ಯಾತೆ ತೆಗೆದು ಗ್ರಾಮದ ಸ್ನೇಹಿತರನ್ನು ಕರೆಸಿಕೊಂಡು ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ.
ತೀವ್ರ ಗಾಯಗೊಂಡಿರುವ ಚಾಲಕ ಹರೀಶ್ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಕೆಎಸ್ಆರ್ಟಿಸಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಗೌರಿಬಿದನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳು ನಾಪತ್ತೆ ಆಗಿದ್ದಾರೆ.