ಮಂಗಳೂರು: ಶಬರಿಮಲೆ ವಿಚಾರದ ಹಿನ್ನೆಲೆ ಕಾಸರಗೋಡಿನಲ್ಲಿ ಹಿಂಸಾಕೃತ್ಯ ಮುಂದುವರಿದಿದ್ದು, ಗುರುವಾರ ರಾತ್ರಿ ಕಿಡಿಗೇಡಿಗಳು ಐವರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡದ ಮಂಜೇಶ್ವರ ಬಳಿಯ ಕುಂಜತ್ತೂರಿನಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಕುಂಜತ್ತೂರಿನ ನಿವಾಸಿಗಳಾದ ಸಂತೋಷ್, ಶರತ್, ರಾಜೇಶ್, ನಿತೇಶ್, ಗುಣಪಾಲ್ ಎಂದು ಗುರುತಿಸಲಾಗಿದೆ. ಈ ಹಲ್ಲೆಯಲ್ಲಿ ಇಬ್ಬರು ಗಂಭೀರ ಗಾಯವಾಗಿದ್ದು, ಎಲ್ಲರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಷ್ಟೇ ಅಲ್ಲದೆ ಕಡಂಬಾರು ದೇವಸ್ಥಾನದ ಬಳಿಯಿದ್ದ ಇಬ್ಬರು ಯುವಕರ ಮೇಲೂ ತಲ್ವಾರ್ನಿಂದ ಹಲ್ಲೆ ಮಾಡಲಾಗಿದೆ. ಘಟನೆ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಭೇಡಿ ನೀಡಿ ಪರಿಶೀಲನೆ ನಡೆಸಿದ್ದು, ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕಾಸರಗೋಡಿನಲ್ಲಿ ಮುಂದುವರಿದ ಹಿಂಸಾಕೃತ್ಯ ಹಿನ್ನೆಲೆ ಇಂದು ಮಂಜೇಶ್ವರ ತಾಲೂಕಿನಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಹಾಗೆಯೇ ತಾಲೂಕು ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಈ ಸಂಬಂಧ ಹಿಂಸಾಚಾರ ಮುಂದುವರಿದು ಕೋಮುದ್ವೇಷಕ್ಕೆ ತಿರುಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿದ ವಿಚಾರವಾಗಿ ಕೇರಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಎಲ್ಲೆಡೆ ಈ ವಿಚಾರವಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಪ್ರತಿಭಟನೆ, ಹಿಂಸಾಚಾರ, ಕಲ್ಲು ತೂರಾಟ ಹೀಗೆ ಪ್ರತಿಭಟನಾಕಾರರು ಸಿಡಿದೆದ್ದಿದ್ದಾರೆ. ಇದೇ ಬಿಸಿ ಗಡಿಜಿಲ್ಲೆ ಕಾಸರಗೋಡಿಗೂ ತಟ್ಟಿದೆ. ಗುರುವಾರ ಹಲವೆಡೆ ಕಲ್ಲು ತೂರಾಟ ಹಾಗೂ ಗಲಾಟೆಗಳು ಕೂಡ ನಡೆದಿತ್ತು. ಇಂದು ಕೂಡ ಕೇರಳದ ಕಾಸರಗೋಡಿನಲ್ಲಿ ಹಿಂಸಾಕೃತ್ಯ ಮುಂದುವರಿದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv