ಬಾಗಲಕೋಟೆ: ಏಷ್ಯನ್ ಚಾಂಪಿಯನ್ಸ್ ಗೇಮ್ಸ್ ಕುಸ್ತಿಯಲ್ಲಿ ಜಿಲ್ಲೆಯ ಮುಧೋಳ ತಾಲೂಕಿನ ಕುಸ್ತಿಪಟು ಚಿನ್ನದ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ನಿಂಗಪ್ಪ ಗೆನೆಣ್ಣವರ ಎಂಬ ಕುಸ್ತಿಪಟುವೇ ಈ ವಿಶಿಷ್ಟ ಸಾಧನೆ ಮಾಡಿದ ಯುವಕ. ನಿಂಗಪ್ಪ 17 ವರ್ಷದೊಳಗಿನ 45 ಕೆ.ಜಿ ವಿಭಾಗದಲ್ಲಿ ದೇಶಕ್ಕೆ ಚಿನ್ನ ತಂದ ಕುಸ್ತಿಪಟುವಾಗಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಹಳಿಂಗಳಿ ಮೂಲದ ಪೈಲ್ವಾನ್ ನಿಂಗಪ್ಪ, ಕಿರಗಿಸ್ತಾನದ ಬಿಸ್ಕೆಕ್ ನಗರದಲ್ಲಿ ನಡೆದಿರುವ ಏಷ್ಯನ್ ಗೇಮ್ಸ್ನಲ್ಲಿ, 4 ರಾಷ್ಟ್ರದ ಕುಸ್ತಿಪಟುಗಳನ್ನು ಸೋಲಿಸಿ ಚಿನ್ನದ ಬೇಟೆಯಾಡಿದ್ದಾರೆ.
ಫೈನಲ್ನಲ್ಲಿ ಇರಾನ್ ದೇಶದ ನವಾಜಿ ಅಲಿ ಎಂಬ ಕುಸ್ತಿಪಟುವನ್ನು ಮಣಿಸಿ ದೇಶದ ತಿರಂಗ ಹೊತ್ತು ಕುಣಿದು ಕುಪ್ಪಳಿಸಿದರು. ನಿನ್ನೆ ನಡೆದ ಫೈನಲ್ನಲ್ಲಿ ನಿಂಗಪ್ಪ ಈ ವಿಜಯದ ನಗೆ ಬೀರಿದ್ದಾರೆ. ಸದ್ಯಕ್ಕೆ ಮುಧೋಳ ನಗರದಲ್ಲಿ ಕುಸ್ತಿಪಟು ನಿಂಗಪ್ಪ ಕುಟುಂಬ ನೆಲೆಸಿದ್ದಾರೆ. ನಿಂಗಪ್ಪ ಮುಧೋಳ ಜೈ ಹನುಮಾನ ವ್ಯಾಯಾಮ ಶಾಲೆಯಲ್ಲಿ 7 ವರ್ಷ ತರಬೇತಿ ಪಡೆದಿದ್ದಾರೆ. ನಂತರ ರಾಜ್ಯ ಮಟ್ಟದ ಕುಸ್ತಿಯಲ್ಲಿ ಪ್ರಥಮ, ರಾಜಸ್ಥಾನದಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ತೃತೀಯ ಸ್ಥಾನ ಪಡೆದು ನಿಂಗಪ್ಪ ಎಲ್ಲರ ಗಮನವನ್ನ ತನ್ನತ್ತ ಸೆಳೆದಿದ್ದರು. ಇದನ್ನೂ ಓದಿ: ಬೀದಿ ಬೀದಿ ಸುತ್ತಾಡಬೇಡಿ ಕೊಹ್ಲಿ, ರೋಹಿತ್ ವಿರುದ್ಧ ಬಿಸಿಸಿಐ ಗರಂ
ನಿಂಗಪ್ಪನ ಸಾಧನೆ ಕಂಡು ಹರಿಯಾಣದ ಕುಸ್ತಿ ಇಂಡಿಯನ್ ಕ್ಯಾಂಪ್ಗೆ ಆಯ್ಕೆಯಾಗಿದ್ದರು. ಹರಿಯಾಣ ಇಂಡಿಯನ್ ಕ್ಯಾಂಪ್ನಲ್ಲಿ ಕಳೆದ ಎರಡು ವರ್ಷ ತರಬೇತಿ ಪಡೆದಿದ್ದರು. ಇದೀಗ ಎಸ್ಎಸ್ಎಲ್ಸಿ ಓದುತ್ತಿರುವ ನಿಂಗಪ್ಪ ಗೆನೆಣ್ಣವರ, ತಂದೆ ತಾಯಿ ಕೃಷಿ ಕಾರ್ಮಿಕರು, ಮತ್ತೊಬ್ಬರ ಜಮೀನಿನಲ್ಲಿ ಕೃಷಿ ಕೆಲಸ ಮಾಡ್ತಾರೆ. ನಿಂಗಪ್ಪ ಬಡತನದಲ್ಲಿ ಬೆಳೆದು, ಕುಸ್ತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ನಕಂಗಪ್ಪ ಏಷ್ಯನ್ ಗೆಮ್ಸ್ಗೆ, ಕರ್ನಾಟಕದಿಂದ ಇವರೊಬ್ಬರಷ್ಟೇ ಭಾಗಿಯಾಗಿದ್ದರು. ಅಲ್ಲಿ ವಿಜಯ ಪತಾಕೆ ಹಾರಿಸುವ ಮೂಲಕ ದೇಶ, ರಾಜ್ಯ ಹಾಗೂ ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇದನ್ನೂ ಓದಿ: ತಂಡಕ್ಕೆ ಸ್ಫೂರ್ತಿ ತುಂಬಲು ಲಕ್ಷ, ಲಕ್ಷ ಸುರಿದು ಜ್ಯೋತಿಷಿಯನ್ನು ನೇಮಕ ಮಾಡಿದ AIFF