ಅಮೀನಘಡದ ಜನಪ್ರಿಯ ವಿಜಯ ಕರದಂಟು (Karadantu) ಸಂಸ್ಥೆಯ ಐದನೇ ಮಳಿಗೆ ಮೊನ್ನೆ ಮಲ್ಲೇಶ್ವರದಲ್ಲಿ ಪ್ರಾರಂಭವಾಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಈ ಮಳಿಗೆಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ಯುವ ಉದ್ಯಮಿಗಳ ಬೆನ್ನಿಗೆ ನಿಂತಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್.
1907ರಲ್ಲಿ ಅಮೀನಘಡದಲ್ಲಿ ಪ್ರಾರಂಭವಾದ ವಿಜಯ ಕರದಂಟು ಇಂದು ರಾಜ್ಯಾದ್ಯಂತ 18 ಶಾಖೆಗಳನ್ನು ಹೊಂದಿದೆ. ಅಮೀನಘಡದಲ್ಲಿ ಪ್ರಾರಂಭವಾದ ಮಳಿಗೆ ಇಂದು ಬಾದಾಮಿ, ಐಹೊಳೆ, ಬಾಗಲಕೋಟೆ, ರಾಯಚೂರು, ಸಿಂಧನೂರು, ಇಳಕಲ್ಲು, ಹುಬ್ಬಳ್ಳಿ, ಬೆಂಗಳೂರು ಮುಂತಾದ ಊರುಗಳಲ್ಲಿವೆ. ಬೆಂಗಳೂರಿನಲ್ಲೇ ವಿಜಯನಗರ, ಮಲ್ಲೇಶ್ವರ, ಜಯನಗರ, ಡಿ.ವಿ.ಜಿ. ರಸ್ತೆ ಮತ್ತು ಮಲ್ಲೇಶ್ವರದಲ್ಲಿ ಮಳಿಗೆಗಳಿದ್ದು, ಈ ಸಂಸ್ಥೆಯನ್ನು ಕುಟುಂಬದ ನಾಲ್ಕನೇ ತಲೆಮಾರಿನವರಾದ ಸಂತೋಷ್ (Santhosh) ಮತ್ತು ಸುನೀಲ್ (Sunil) ಮುನ್ನಡೆಸುತ್ತಿದ್ದಾರೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ
‘ಪೌಷ್ಠಿಕ ಸಿಹಿತಿನಿಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರದಂಟಿಗೆ ಶುದ್ಧ ತುಪ್ಪ, ಸಾವಯವ ಬೆಲ್ಲ, ಗೋಡಂಬಿ, ಬಾದಾಮಿ, ಅಂಜೂರ, ಒಣಕೊಬ್ಬರಿ, ಗಸಗಸೆ, ಒಣದ್ರಾಕ್ಷಿ ಮುಂತಾದ ಪೌಷ್ಠಿಕ ಪದಾರ್ಥಗಳನ್ನು ಬೆರಸಿ ಮಾಡಲಾಗುತ್ತದೆ. ಹಿಂದೆ ಗರಡಿಮನೆ ಪೈಲ್ವಾನರ ಶಕ್ತಿ-ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರದಂಟನ್ನು ನೀಡಲಾಗುತ್ತಿತ್ತು. ಅಷ್ಟೇ ಅಲ್ಲ, ಗರ್ಭಿಣಿಯರಲ್ಲಿ ಪೌಷ್ಠಿಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಕರದಂಟನ್ನು ಕೊಡಲಾಗಿತ್ತು. ಆದರೆ, ಈಗ ಕರದಂಟು ಆರೋಗ್ಯಕರ ಸಿಹಿತಿನಿಸಾಗಿದ್ದು, ಎಲ್ಲ ವಯಸ್ಸಿನವರೂ ಸವಿಯಬಹುದಾಗಿದೆ’ ಎನ್ನುತ್ತಾರೆ ಸುನೀಲ್ ಮತ್ತು ಸಂತೋಷ್.
ಇದರಲ್ಲಿ ಸಕ್ಕರೆ ಪ್ರಮಾಣ ಬಹಳ ಕಡಿಮೆ ಇರುವುದರಿಂದ ಮಧುಮೇಹ ಇರುವವರು ಸಹ ಯಾವುದೇ ಭಯವಿಲ್ಲದೆ ಈ ಸಿಹಿತಿನಿಸನ್ನು ತಿನ್ನಬಹುದಾಗಿದೆಯಂತೆ. ವಿಜಯ ಕರದಂಟು ಮಳಿಗೆಗಳಲ್ಲಿ ಕರದಂಟು ಅಲ್ಲದೆ ಕಾಜು, ಪೇಡ, ಬಂಗಾಲಿ ಸೇರಿದಂತೆ ಬೇರೆ ಸಿಹಿತಿನಿಸುಗಳು ಸಹ ಲಭ್ಯವಿದೆ ಎನ್ನುವುದು ಸುನೀಲ್ ಮಾತು.