ಮಂಡ್ಯ: ಕಸ ಮುಕ್ತ ನಗರವನ್ನಾಗಿ ಮಾಡಲು ಇದೀಗ ಕಲಾವಿದನ ಕುಂಚದ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಂಡ್ಯದಲ್ಲಿ ಮಾಡಲಾಗುತ್ತಿದೆ.
ಮಂಡ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಬರುವ ಗೋಡೆಗಳ ಮೇಲೆ ಸ್ವಚ್ಚತೆಯ ಕುರಿತ ಚಿತ್ರಗಳನ್ನು ಬಿಡಿಸುವ ಮೂಲಕ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸಲಾಗುತ್ತಿದೆ. ಹೊಸ ವರ್ಷದ ಅಂಗವಾಗಿ ಕರ್ನಾಟಕ ರಾಜ್ಯ ಕುಂಚ ಕಲಾವಿದರ ಸಂಘ ಹಾಗೂ ಮಂಡ್ಯ ನಗರ ಸಭೆಯ ವತಿಯಿಂದ ಜನರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸಲು ಈ ಹೊಸ ಉಪಾಯ ಮಾಡಲಾಗಿದೆ.
ಪ್ಲಾಸ್ಟಿಕ್ ತ್ಯಜಿಸಿ ಪ್ರಕೃತಿಯನ್ನು ಉಳಿಸಿ, ಸ್ವಚ್ಛತೆ ಕಾಪಡಿ ಆರೋಗ್ಯಕರವಾಗಿರಿ ಎಂಬ ಘೋಷವಾಕ್ಯದ ಮೂಲಕ ಚಿತ್ರಗಳನ್ನು ಬಿಡಿಸಲಾಗಿದೆ. ಈ ಮೂಲಕ ಮಂಡ್ಯ ನಗರವನ್ನು ಸ್ವಚ್ಛ ನಗರಿಯನ್ನಾಗಿ ಮಾಡಲು ಇದೀಗ ಮಂಡ್ಯ ನಗರ ಸಭೆ ಮುಂದಾಗಿದೆ. ಈ ನಡುವೆ ಸಾರ್ವಜನಿಕರಿಗೆ ಗಿಡಗಳನ್ನು ವಿತರಣೆ ಮಾಡುವ ಮೂಲಕ ಜನರಿಗೆ ಪರಿಸರದ ಕುರಿತು ಅರಿವು ಮೂಡಿಸಲಾಯಿತು.