ತುಮಕೂರು: ಕಾಫಿ ಕಿಂಗ್ ಸಿದ್ಧಾರ್ಥ್ ಅವರು ನಿಗೂಢವಾಗಿ ಸಾವನ್ನಪ್ಪಿದ್ದು, ಇದೀಗ ಅವರನ್ನು ನೆನೆದು ಅಭಿಮಾನಿಗಳು ಮತ್ತು ಹಿತೈಷಿಗಳು ಕಣ್ಣೀರಿಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ತಮ್ಮದೇ ಆದ ರೀತಿಯಲ್ಲಿ ಸ್ಮರಿಸುತ್ತಿದ್ದಾರೆ. ಹೀಗೆ ತುಮಕೂರಿನ ಚಿತ್ರ ಕಲಾವಿದನೊಬ್ಬ ಕಾಫಿ ಪುಡಿಯಿಂದ ವಿಭಿನ್ನವಾಗಿ ಅವರ ಚಿತ್ರವನ್ನ ಬರೆಯುವ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಪರಮೇಶ್ ಇಂಟೀರಿಯರ್ ಡೆಕೋರೇಟರ್ ಸಿದ್ಧಾರ್ಥ್ ಹೆಗಡೆಯವರ ಭಾವಚಿತ್ರವನ್ನು ಕಾಫಿ ಪುಡಿ ಬಳಸಿ ತಯಾರಿಸಿರುವುದು ಗಮನಾರ್ಹವಾಗಿದೆ. ತುಮಕೂರು ನಗರದಲ್ಲಿರುವ ಕೆಫೆ ಕಾಫಿ ಡೇ ಗೆ ಬಂದ ಪರಮೇಶ್ ಅಲ್ಲಿನ ಸಿಬ್ಬಂದಿಯ ಅನುಮತಿಯ ಮೇರೆಗೆ ಅಲ್ಲಿಯೇ ಕಾಫಿ ಪುಡಿಯನ್ನು ಖರೀದಿ ಮಾಡಿ ಸಿದ್ಧಾರ್ಥ್ ಅವರ ಭಾವಚಿತ್ರವನ್ನು ರಚಿಸಿದ್ದಾರೆ.
ಪರಮೇಶ್ ರಚಿಸಿರುವ ಭಾವಚಿತ್ರ ಸಿದ್ಧಾರ್ಥ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸಿದ್ಧಾರ್ಥ್ ಅವರು ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಅವರು ತುಂಬಾ ಸರಳವಾದ ವ್ಯಕ್ತಿಯಾಗಿದ್ದು, ಕನ್ನಡದವರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವುದು ಹೆಮ್ಮೆಯಾಗಿದೆ. ಹೀಗಾಗಿ ನಾನು ಅವರಿಗಾಗಿ ಒಂದು ಸಣ್ಣ ಅರ್ಪಣೆ ಮಾಡಬೇಕು ಎಂದು ವಿಶೇಷವಾಗಿ ಕಾಫಿಪುಡಿಯಲ್ಲಿ ಅವರ ಚಿತ್ರವನ್ನು ಬಿಡಿಸಿದ್ದೇನೆ. ಮೊದಲಿಗೆ ಗಮ್ನಲ್ಲಿ ಚಿತ್ರ ಬಿಡಿಸಿ ಅದರ ಮೇಲೆ ಕಾಫಿಪುಡಿ ಹಾಕಿ ಅವರ ಚಿತ್ರ ಬಿಡಿಸಿದ್ದೇನೆ. ಅವರ ಸಾವಿನಿಂದ ನನಗೂ ತುಂಬಾ ದುಃಖವಾಗಿದೆ ಎಂದು ಕಲಾವಿದ ಬೇಸರ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=Ebj1rDA8_uA