– 6 ಸಾವಿರ ಅನಕ್ಷರಸ್ಥ ಖೈದಿಗಳಿಗೆ ಜೈಲಲ್ಲೇ ಶಿಕ್ಷಣ, ಇಂದಿನಿಂದಲೇ ಜಾರಿ
ಚಿಕ್ಕಮಗಳೂರು: ನಟ ಪುನೀತ್ ರಾಜ್ಕುಮಾರ್ ಸಮಾಧಿ ಬಳಿ ಈಗಲೇ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಿದರೆ ಜನ ಮುಗಿಬೀಳುತ್ತಾರೆ. ಹಾಗಾಗಿ, ಕುಟುಂಬದ ಎಲ್ಲ ವಿಧಿ-ವಿಧಾನ ಮುಗಿದ ಬಳಿಕ ಸುತ್ತಲೂ ಬೇಲಿ ಹಾಕಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐದಾರು ದಿನದಲ್ಲಿ ಎಲ್ಲ ಕೆಲಸ ಮುಗಿಸಿ ಪುನೀತ್ ಸಮಾಧಿಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡುವುದಾಗಿ ತಿಳಿಸಿದರು.
ಬೆಳಗಾವಿಯಲ್ಲಿ ಎಂಇಎಸ್ ಅವಹೇಳನಕಾರಿ ಪೋಸ್ಟ್ ಬಗ್ಗೆ ಮಾತನಾಡಿದ ಅವರು, ಅದೇ ಅವರಿಗೆ ಜೀವಾಳ. ಎಂಇಎಸ್ ಪದೇ-ಪದೇ ಈ ರೀತಿಯ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಮಾಡಿ ಅದು ಮೂಲೆಗುಂಪಾಗಿದೆ. ಅದು ಮಹಾರಾಷ್ಟ್ರದಲ್ಲೂ ಇಲ್ಲ. ಭಾಷೆ ಬಗ್ಗೆ ಭಾವೋದ್ವೇಗ ಉಂಟುಮಾಡಿ ಚುನಾವಣೆ ಗೆಲ್ಲಬಹುದು. ಇದರಿಂದ ರಾಜಕಾರಣ ಮಾಡಬಹುದು ಎಂದು ಭಾವಿಸಿದ್ದಾರೆ. ಎಂಇಎಸ್ ಗೆ ಈಗಾಗಲೇ ಇತಿಶ್ರೀ ಹಾಡಲಾಗಿದೆ. ಬೆಳಗಾವಿ ಕಾರ್ಪೋರೇಷನ್ ಬಿಜೆಪಿಗೆ ಹಿಡಿತಕ್ಕೆ ಬಂದಿದ್ದು, ಎಂಇಎಸ್ ನ ಮೂಲೆ ಗುಂಪು ಮಾಡಲಾಗಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಇನ್ಸ್ಟಾದಿಂದ ಮದುವೆ ಫೋಟೋ ಡಿಲೀಟ್ ಮಾಡಿದ ಸಮಂತಾ
ಇದೇ ವೇಳೆ, ಜೈಲಿನ ಖೈದಿಗಳಿಗೆ ಶಿಕ್ಷಣದ ಬಗ್ಗೆ ಮಾತನಾಡಿದ ಅವರು, ರಾಜ್ಯದ 50 ಜೈಲುಗಳಲ್ಲಿ ಹೆಬ್ಬೆಟ್ಟು ಒತ್ತುವವರು ಇದ್ದಾರೆ. ಜೈಲಿನಲ್ಲಿ ಸುಮಾರು ಆರು ಸಾವಿರ ಅನಕ್ಷರಸ್ಥರಿದ್ದಾರೆ. ಅವರಿಗೆ ಅಕ್ಷರ ಕಲಿಸುವ ಕೆಲಸವನ್ನು ಆಂದೋಲನದ ರೀತಿ ಮಾಡುತ್ತಿದ್ದೇವೆ ಎಂದರು.
ಇಂದು ಗೃಹ ಇಲಾಖೆಯಿಂದ ಕನ್ನಡದಲ್ಲಿ ಸಂಜ್ಞೆಯನ್ನು ಕೊಡುವಂತಹ ಪದ್ಧತಿ ಜಾರಿಗೆ ತಂದಿದ್ದೇವೆ. ಇಷ್ಟು ದಿನ ಹಿಂದಿ ಮತ್ತು ಇಂಗ್ಲೀಷ್ನಲ್ಲಿ ಮಾತ್ರ ಸಂಜ್ಞೆಯನ್ನು ಕೊಡುವ ಪದ್ಧತಿ ಇತ್ತು. ಇವತ್ತಿನಿಂದ ಕನ್ನಡದಲ್ಲಿ ಕೊಡುತ್ತಿದ್ದೇವೆ. ಕಳೆದ ಒಂದು ವರ್ಷದ ಹಿಂದಿನಿಂದಲೂ ಕನ್ನಡದಲ್ಲಿ ತರ್ಜುಮೆ ಮಾಡಿ ತಯಾರು ಮಾಡಿ ಇಟ್ಟಿದ್ದರು. ಅದನ್ನು ಜಾರಿಗೆ ತರಲೇಬೇಕೆಂದು ಯೋಚನೆ ಮಾಡಿ ಸರ್ಕಾರದಿಂದ ಆದೇಶ ಹೊರಡಿಸಿ ಇಂದಿನಿಂದ ಜಾರಿಗೆ ತರುತ್ತಿದ್ದೇವೆ ಎಂದು ತಿಳಿಸಿದರು.
ಜೈಲಿನಲ್ಲಿರುವ ಅನಕ್ಷರಸ್ಥರಿಗೆ ಅಕ್ಷರ ಕಲಿಸೋದಕ್ಕೂ ಸರ್ಕಾರ ಮುಂದಾಗಿದೆ. ಅದಕ್ಕೆ ವಯಸ್ಕರ ಶಿಕ್ಷಣ ಸಮಿತಿ ಅವರು ಹಾಗೂ ಜೈಲಿನಲ್ಲಿರುವ ವಿದ್ಯಾವಂತ ಖೈದಿಗಳಿಗೆ ಸಂಬಳ ನೀಡಿ ನೇಮಕ ಮಾಡಿಕೊಂಡಿದ್ದು, ಇರುವಷ್ಟು ದಿನವೂ ತರಗತಿ ನಡೆಸಿ ಓದು ಬರಹ ಕಲಿತು ಖೈದಿಗಳು ಹೊರ ಹೋಗಬೇಕಾಗುತ್ತೆ. ಈ ರೀತಿಯ ಕೆಲಸವನ್ನ ಇಂದಿನಿಂದ ಬಂದಿಖಾನೆ ಇಲಾಖೆ ಜಾರಿಗೆ ತಂದಿದೆ ಎಂದರು. ಇದನ್ನೂ ಓದಿ: ನಮ್ಮನ್ನ ಎಂದೂ ಅವ್ರು ಕೆಲ್ಸದವರಂತೆ ನೋಡಿಲ್ಲ: ಕೇಶ ವಿನ್ಯಾಸಕಾರ ಕಾರ್ತಿಕ್ ಭಾವುಕ