– ದೇಶದ ಯುವಜನರು ಸತ್ಯದ ಹುಡುಕಾಟದಲ್ಲಿದ್ದಾರೆ
ನವದೆಹಲಿ: ಯುವಜನರ ಧ್ವನಿಯನ್ನು ಎಲ್ಲಾ ರಾಜಕೀಯ ಪಕ್ಷಗಳು ಗೌರವಿಸಬೇಕು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕರೆ ನೀಡಿದರು.
ಲೋಕಸಭೆಯಲ್ಲಿ ʻಸಾರ್ವಜನಿಕ ಪರೀಕ್ಷೆಗಳು (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ʼರ ಕುರಿತ ಚರ್ಚೆ ವೇಳೆ ಮಾತನಾಡಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಸಮರ್ಥಿಸಿಕೊಂಡರು.
ವಿದ್ಯಾರ್ಥಿಗಳ ಪ್ರತಿಭಟನೆ ಯಾವುದೇ ಕೋಪ ಅಥವಾ ಹಿಂದೆಯಲ್ಲ, ಅದು ʻಭಾರತದ ಯುವಜನತೆಯ ಭರವಸೆಯ ಅಭಿವ್ಯಕ್ತಿʼ ಎಂದು ಬಣ್ಣಿಸಿದರು. ತ್ಮಮ ಆತಂಕ, ದುಗುಡವನ್ನು ಅಭಿವ್ಯಕ್ತಪಡಿಸಲು ಯುವ ಸಮೂಹ ಬೀದಿಗಿಳಿದಿರುವುದು ದೇಶದ ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸಿದೆ. ನಮ್ಮ ದೇಶದ ಭವಿಷ್ಯವಾದ ಯುವಜನರು ಬೀದಿಗಿಳಿದು ಹೋರಾಟ ಮಾಡಿದ್ದು ನೋಡಿ ನಿಜಕ್ಕೂ ನನಗೆ ಅಪಾರ ಸಂತೋಷವಾಯಿತು, ಭರವಸೆಯೂ ಮೂಡಿತು ಎಂದು ರಾಹುಲ್ ಗಾಂಧಿ ಹೇಳಿದರು.
ಪ್ರತಿಭಟನೆಗಳು ಮುಂದಿನ ಪೀಳಿಗೆಯ ಆಶೋತ್ತರಗಳನ್ನ ಪ್ರತಿಬಿಂಬಿಸುತ್ತವೆ ಎಂದು ಒತ್ತಿ ಹೇಳಿದ ಅವರು, ಇದು ಕೋಪ, ಹಿಂಸೆ ಅಥವಾ ದ್ವೇಷದ ಅಭಿವ್ಯಕ್ತಿಯಲ್ಲ. ಇದು ಈ ದೇಶದ ಯುವಜನತೆಯ, ಭವಿಷ್ಯದ ಪೀಳಿಗೆಯ ಧ್ವನಿಯಾಗಿದೆ ಎಂದರು.
ಯುವಜನರ ಧ್ವನಿಯನ್ನು ಎಲ್ಲಾ ಪಕ್ಷಗಳು ಗೌರವಿಸಬೇಕು
ಇನ್ನೂ ʻಲೋಕಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆʼ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ವಿದ್ಯಾರ್ಥಿಗಳು ಸತ್ಯ ಮತ್ತು ಜ್ಞಾನದ ಹುಡುಕಾಟದಲ್ಲಿದ್ದಾರೆ. ಯುವಸಮೂಹದ ಧ್ವನಿಯನ್ನು ತಳ್ಳಿಹಾಕದೇ ಸರ್ಕಾರ ಆಲಿಸಬೇಕು. ಯುವಜನರ ಧ್ವನಿಯನ್ನು ಎಲ್ಲಾ ಪಕ್ಷಹಗಳು ಗೌರವಿಸಬೇಕು. ಬಿಜೆಪಿಯಲ್ಲಿರುವ ನನ್ನ ಸ್ನೇಹಿತರು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಈ ಅಭಿವ್ಯಕ್ತಿಯನ್ನು ಗೌರವಿಸಬೇಕು ಎಂದು ಕರೆ ನೀಡಿದರು.
