ಕನ್ನಡ ಚಿತ್ರರಂಗದಲ್ಲಿ ತಮ್ಮ ನೈಜ ಹಾಗೂ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಖುಷಿ ರವಿ, ರೋಷಿನಿ ಪ್ರಕಾಶ್, ಸಂಗೀತಾ ಭಟ್ ಮತ್ತು ಸಿಂಧು ಶ್ರೀನಿವಾಸ ಮೂರ್ತಿ ಇದೇ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಾಲ್ವರು ಪ್ರತಿಭಾವಂತ ನಟಿಯರ ಸಂಗಮದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರವೇ ʼನಾಕು ತಂತಿʼ. ಕಥೆಗೆ ತಕ್ಕಂತೆ ಗಟ್ಟಿ ಪಾತ್ರಗಳು, ಭಾವನಾತ್ಮಕ ತೀವ್ರತೆ ಹಾಗೂ ವಿಭಿನ್ನ ಆಯಾಮಗಳನ್ನು ಒಳಗೊಂಡಿರುವ ಈ ಚಿತ್ರವು ಸ್ಯಾಂಡಲ್ವುಡ್ನಲ್ಲಿ ಈಗಾಗಲೇ ಭಾರಿ ಕುತೂಹಲ ಹುಟ್ಟುಹಾಕಿದೆ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಮಹೇಶ್ ರಾಜ್, ಗೌತಮ್ ಅನ್ವಿತ್, ಶಶಿಕುಮಾರ್ ವಿ ಮತ್ತು ಪ್ರೀತಮ್ ಶಿವಕುಮಾರ್ ಎಂಬ ನಾಲ್ವರು ಭರವಸೆಯ ಯುವ ನಿರ್ದೇಶಕರು ಜಂಟಿಯಾಗಿ ಇದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು. ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಹಾಗೂ ಕಥಾ ನಿರೂಪಣೆಯನ್ನು ಒಗ್ಗೂಡಿಸಿ ಈ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಹೊಸ ತಲೆಮಾರಿನ ಸೃಜನಶೀಲ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಜಯರಾಮ್ ದೇವಸಮುದ್ರ ನೇತೃತ್ವದ ಪ್ರತಿಷ್ಠಿತ ‘ಸುರಮ್ ಮೂವೀಸ್’ ಸಂಸ್ಥೆಯು ಯೋಗೇಶ್ ಬಸವೇಗೌಡ ಅವರ ‘ಡಿಕೆಎಸ್ ಪ್ರೊಡಕ್ಷನ್ಸ್’ ಹಾಗೂ ನಂಬೂರು ಸಾಯಿ ಅವರ ‘ಸಾಯಿ ಬಿಂದು ಪ್ರೊಡಕ್ಷನ್’ ಜೊತೆ ಕೈಜೋಡಿಸಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದೆ.
ಕಂಟೆಂಟ್ ಆಧಾರಿತ ಸಿನಿಮಾಗಳಿಗೆ ಹೆಸರಾಗಿರುವ ‘ಸುರಮ್ ಮೂವೀಸ್’ ಬ್ಯಾನರ್ನಡಿ ಈಗಾಗಲೇ ‘ನಿದ್ರಾದೇವಿ ನೆಕ್ಸ್ಟ್ ಡೋರ್’, ಚೈತ್ರಾ ಆಚಾರ್ ಅಭಿನಯದ ‘ಎಲ್ಎಸ್ಡಿ’, ‘ನೀ ನಂಗೆ ಅಲ್ಲವಾ’ ಮತ್ತು ಶ್ರೀಮುರಳಿ ನಟನೆಯ ಬಹುನಿರೀಕ್ಷಿತ ‘ಉಗ್ರಾಯುಧಂ’ ಮುಂತಾದ ಮಹತ್ವಾಕಾಂಕ್ಷೆಯ ಚಿತ್ರಗಳು ಸಿದ್ಧವಾಗುತ್ತಿವೆ. ಆ ಸಾಲಿಗೆ ಇದೀಗ ಸೇರ್ಪಡೆಗೊಂಡಿರುವ ‘ನಾಕು ತಂತಿ’ ಚಿತ್ರಕ್ಕೆ ಕನ್ನಡದ ಉದಯೋನ್ಮುಖ ಸಂಗೀತ ಪ್ರತಿಭೆ ಸುಮೇಧ್ ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಸೊಗಡನ್ನು ಆಧುನಿಕ ಸೌಂಡಿಂಗ್ನೊಂದಿಗೆ ಬೆರೆಸುವಲ್ಲಿ ಸೈ ಎನಿಸಿಕೊಂಡಿರುವ ಸುಮೇಧ್, ‘ಸು ಫ್ರಮ್ ಸೋ’ ಚಿತ್ರದ ನಂತರ ಈ ಸಿನಿಮಾದ ಭಾವನಾತ್ಮಕ ನಿರೂಪಣೆಗೆ ತಕ್ಕಂತೆ ಸಂಗೀತ ನೀಡಿದ್ದಾರೆ. ಇದನ್ನೂ ಓದಿ: 20 ವರ್ಷಗಳ ಬಳಿಕ ಸೂರ್ಯ, ಜ್ಯೋತಿಕಾ ಸ್ಟಾರ್ ದಂಪತಿ ಮತ್ತೆ ವಿವಾಹ ಆಗಿದ್ಯಾಕೆ?
ಚಿತ್ರದ ಸಂಪೂರ್ಣ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಸದ್ಯ ಬಿರುಸಿನಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗುತ್ತಿವೆ. ನಾಲ್ವರು ನಟಿಯರ ಅದ್ಭುತ ಅಭಿನಯ ಮತ್ತು ನಾಲ್ವರು ನಿರ್ದೇಶಕರ ವಿಭಿನ್ನ ಕಲ್ಪನೆಯಲ್ಲಿ ಅರಳಿರುವ ‘ನಾಕು ತಂತಿ’ ಚಿತ್ರದ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಬೆಳ್ಳಿಪರದೆಯ ಮೇಲೆ ಪ್ರೇಕ್ಷಕರನ್ನು ರಂಜಿಸಲು ಸಿನಿಮಾ ತಂಡ ಸಜ್ಜಾಗುತ್ತಿದೆ.ಇದನ್ನೂ ಓದಿ: ಜಂತರ್ ಮಂತರ್ ಪ್ರತಿಭಟನೆ: ಪೆಲೆಟ್ ಗನ್ ಬಳಕೆ, ಮಹಿಳೆಯರ ಮೇಲಿನ ಹಿಂಸಾಚಾರ ತನಿಖೆಗೆ ಸುಪ್ರೀಂ ಸೂಚನೆ

