– ಪೊಲೀಸ್ ಪಡೆ ನನ್ನ ಸುತ್ತ ಕೋಟೆಯಂತೆ ಸುತ್ತುವರಿದಿದೆ
– ನಿತ್ಯದ ಜೀವನ ಬದಲಾದ ಬಗ್ಗೆ ಅರಗ ಮಾತು
ಶಿವಮೊಗ್ಗ: “ಕೆಲ ದಿನಗಳ ಹಿಂದೆ ಸುಖದ ನಿದ್ದೆಯಲ್ಲಿ ಇದ್ದೆ. ಈಗ ಸರಿಯಾಗಿ ನಿದ್ದೆ ಆಗುತ್ತಿಲ್ಲ. ಸರಿಯಾಗಿ ನಿದ್ದೆ ಮಾಡಲು ಪೊಲೀಸರು ಬಿಡುತ್ತಿಲ್ಲ. ಇದರಿಂದ ಕಿರಿಕಿರಿ ಆಗುತ್ತಿದೆ” – ಇದು ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಮಾತುಗಳು.
ಶಿವಮೊಗ್ಗದಲ್ಲಿ ಅಡಿಕೆ ಬೆಳೆಗಾರರ ಸಹಕಾರ ಸಂಘಗಳ ಮಹಾಮಂಡಳ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು. ಗೃಹ ಸಚಿವರು ಈ ರೀತಿ ಮಾತನಾಡಲು ಕಾರಣವಿದೆ. ಈ ಹುದ್ದೆಯನ್ನು ಅಲಂಕರಿಸಿದ ಬಳಿಕ ತನ್ನ ನಿತ್ಯದ ಜೀವನ ಹೇಗೆ ಬದಲಾಗಿದೆ ಎಂಬುದನ್ನು ವಿವರಿಸಿದ್ದಾರೆ.
- Advertisement 2
- Advertisement 3
ಅರಗ ಹೇಳಿದ್ದೇನು?
ನಾನು ಕೃಷಿ, ತೋಟಗಾರಿಕೆ ಸಚಿವ ಸ್ಥಾನ ಸಿಗಬಹುದು ಎಂದು ನಿರೀಕ್ಷೆ ಮಾಡಿದ್ದೆ. ಆದರೆ, ನಮ್ಮ ಮುಖಂಡರು ಭರವಸೆ ಇಟ್ಟು ಗೃಹ ಖಾತೆಯನ್ನು ನೀಡಿದ್ದಾರೆ.
- Advertisement 4
ಗೃಹ ಖಾತೆ ವಹಿಸಿಕೊಂಡ ದಿನದಿಂದ ಸರಿಯಾಗಿ ನಿದ್ರೆ ಮಾಡಲು ಸಹ ಆಗುತ್ತಿಲ್ಲ. ಪೊಲೀಸ್ ಅಧಿಕಾರಿಗಳು ಮಧ್ಯರಾತ್ರಿ, ಬೆಳಗಿನ ಜಾವ ಸಹ ಕರೆ ಮಾಡಿ ಮಾಹಿತಿ ಕೊಡುತ್ತಿರುತ್ತಾರೆ. ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ವಿಶ್ವಾಸವಿದೆ. ದೊಡ್ಡಸ್ತಿಕೆಗಾಗಿ ನಾನು ಶಾಸಕ ಅಥವಾ ಸಚಿವನಾಗಲಿಲ್ಲ. ಸಚಿವ ಸ್ಥಾನವನ್ನು ಎಂಜಾಯ್ ಮಾಡಲೂ ಆಗುವುದಿಲ್ಲ. ಇದನ್ನೂ ಓದಿ: ನನಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಡ: ಅರಗ ಜ್ಞಾನೇಂದ್ರ
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ‘ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಧೀರನೂ ಅಲ್ಲ’ ಎನ್ನುತ್ತಿರುತ್ತಾರೆ. ನಾನು ಯಾವುದೇ ಸಭೆ ಸಮಾರಂಭಗಳಿಗೆ ನಿಗದಿತ ಸಮಯಕ್ಕೆ ಮುನ್ನವೇ ಹೋಗುವ ವ್ಯಕ್ತಿ. ಆದರೆ ಈಗ ನಿಗದಿತ ಸಮಯಕ್ಕೆ ತಲುಪಲು ಆಗುತ್ತಿಲ್ಲ. ಏಕೆಂದರೆ ಇದ್ದಕ್ಕಿದ್ದಂತೆ ನಾನು ಬಹಳ ದೊಡ್ಡವನಾಗಿದ್ದೇನೆ. ನಾನೇನು ಇಷ್ಟಪಟ್ಟು ದೊಡ್ಡವನಾಗಿದ್ದಲ್ಲ.
ಹಿಂದೆ ನಾನು ನಿಗಮ ಮಂಡಳಿ ಅಧ್ಯಕ್ಷನಾಗಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಹೊಂದಿದ್ದರೂ ಇಂತಹ ಭದ್ರತೆ ಇರಲಿಲ್ಲ . ಆದರೆ ಈಗ ಗೃಹ ಸಚಿವನಾಗುತ್ತಿದ್ದಂತೆ ಪೊಲೀಸ್ ಪಡೆ ನನ್ನ ಸುತ್ತ ಕೋಟೆಯಂತೆ ಸುತ್ತುವರಿದಿದೆ. ನನ್ನ ಸುತ್ತ ಅಷ್ಟೆ ಅಲ್ಲದೇ ಮನೆ ತುಂಬಾ ಪೊಲೀಸರನ್ನು ಹಾಕಿದ್ದಾರೆ. ನಾನು ಬೇಡ ಎಂದರೂ ಕೇಳುತ್ತಿಲ್ಲ. ಮನೆ ಬಾಗಿಲಿಗೆ ಮೆಟಲ್ ಡಿಟೆಕ್ಟರ್ ಹಾಕಿದ್ದಾರೆ. ಅಗ್ನಿ ಶಾಮಕದಳ ವಾಹನ ಬಂದು ನಿಂತಿದೆ. ಇದನ್ನೂ ಓದಿ: ಗೃಹ ಸಚಿವರಿಗೆ ಶ್ರೀರಾಮಾಯಣ ದರ್ಶನಂ ಪುಸ್ತಕ ನೀಡಿ ಗೌರವ ಸಲ್ಲಿಸಿದ ಪೊಲೀಸರು
ಯಾರಾದರೂ ದಾಳಿ ಮಾಡಿ ಗಾಯಗೊಂಡರೆ ಆಸ್ಪತ್ರೆಗೆ ಸಾಗಿಸಲು ಎಂಬಂತೆ ನನ್ನ ಕಾರಿನ ಹಿಂದೆ ಯಾವಾಗಲೂ ಅಂಬುಲೆನ್ಸ್ ಇರುತ್ತದೆ. ಇದೆಲ್ಲ ಬೇಡ ಅಂದ್ರೂ ಕೇಳದೇ ಪ್ರೋಟೋಕಾಲ್ ನೆಪದಲ್ಲಿ ಇವೆಲ್ಲವನ್ನು ಮಾಡುತ್ತಿದ್ದಾರೆ ಎಂದು ಅರಗ ಜ್ಞಾನೇಂದ್ರ ತಮಗೆ ಈಗ ಆಗುತ್ತಿರುವ ಅನುಭವವನ್ನು ಹಂಚಿಕೊಂಡಿದ್ದಾರೆ.