ಶಿವಮೊಗ್ಗ: ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ಸರ್ಕಾರ ಮರು ಪರೀಕ್ಷೆ ಮಾಡಲು ನಿರ್ಧರಿಸಿದ್ದು, ಶೀಘ್ರದಲ್ಲಿಯೇ ಪಿಎಸ್ಐ ಮರು ಪರೀಕ್ಷೆಯ ದಿನಾಂಕ ಪ್ರಕಟ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಿಎಸ್ಐ ಪರೀಕ್ಷೆಯ ಅಕ್ರಮದ ಕುರಿತು ಒಂದೊಂದೆ ಅಂಶ ಹೊರಗೆ ಬರುತ್ತಿದೆ. ಈಗಾಗಲೇ ಪ್ರಕರಣ ಸಂಬಂಧ ಅನೇಕರನ್ನು ಬಂಧಿಸಲಾಗಿದೆ. ಪರೀಕ್ಷೆಯಲ್ಲಿ ನೂತನ ಟೆಕ್ನಾಲಜಿ ಬಳಸಿ ಅಕ್ರಮ ಎಸಗಿದ್ದಾರೆ. ಹೀಗಾಗಿ ಮರು ಪರೀಕ್ಷೆ ನಡೆಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದರು.
ನಾವು ಪರೀಕ್ಷೆಯ ನೋಟಿಫಿಕೇಷನ್ ರದ್ದು ಮಾಡಿಲ್ಲ, ಪರೀಕ್ಷೆ ರದ್ದು ಮಾಡಿದ್ದೇವೆ. ಈಗಾಗಲೇ ಪರೀಕ್ಷೆ ಬರೆದಿದ್ದವರಿಗೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಲಾಗುವುದು. ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದರಿಂದ ನಮ್ಮ ಕಣ್ಣು ತೆರೆದಂತೆ ಆಗಿದೆ. ಪ್ರತಿಭಾವಂತರಿಗೆ ಅವಕಾಶ ಸಿಗಬೇಕು ಎಂಬ ಕಾರಣದಿಂದ ಸರಿಯಾದ ರೀತಿಯಲ್ಲಿ ಪರೀಕ್ಷೆ ನಡೆಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಹುಡುಗಿ ತಂಟೆಗೆ ಹೋಗಬೇಡ ಎಂದರೂ ಕೇಳಲಿಲ್ಲ ನಾಗೇಶ್ – ಪೊಲೀಸರ ಬಳಿ ಆರೋಪಿಯ ಅಣ್ಣ ಹೇಳಿಕೆ
ಪರೀಕ್ಷೆಯಲ್ಲಿ ಈ ರೀತಿ ವಂಚನೆ ಆಗುವುದನ್ನು ತಡೆಗಟ್ಟಲು ಕಾನೂನಿಗೆ ತಿದ್ದುಪಡಿ ತರಬೇಕು ಎನ್ನುವ ಚಿಂತನೆ ಇದೆ. ತಪ್ಪಿತಸ್ಥರು ಜೈಲಿನಿಂದ ಹೊರಗೆ ಬರಬಾರದು. ಕಷ್ಟಪಟ್ಟು ಓದಿದವರಿಗೆ ಅನ್ಯಾಯವಾಗಬಾರದು. ಹಣಕೊಟ್ಟು ಕೊಂಡುಕೊಳ್ಳುತ್ತೇನೆ ಎನ್ನುವವರು ತೊಲಗಬೇಕು. ಮರು ಪರೀಕ್ಷೆಯಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ಇರುವುದಿಲ್ಲ ಎಂದು ಮಾಹಿತಿ ನೀಡಿದರು.
ಪ್ರಿಯಾಂಕ ಖರ್ಗೆ ಅವರು ಮಾಧ್ಯಮದವರ ಮುಂದೆ ಬಂದು ಮಾತನಾಡುತ್ತಿದ್ದಾರೆ. ಅದನ್ನೆ ಅವರು ಸಿಐಡಿ ಮುಂದೆ ಬಂದು ಹೇಳಬೇಕು. ತಮ್ಮ ಬಳಿ ಇರುವ ದಾಖಲಾತಿಗಳನ್ನು ಸಿಐಡಿ ಮುಂದೆ ಬಂದು ನೀಡಲಿ. ಸಾಕ್ಷಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಿ ಎಂದರೆ, ಬೆನ್ನು ತೋರಿಸಿ ಪಲಾಯನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು