ಚಿಕ್ಕಮಗಳೂರು: ಜೆಡಿಎಸ್ನವರು ಈಗ ತೋಟದ ಮನೆಗೆ ಕರೆದೊಯ್ದು ಸಂಘಟನೆ ಮಾಡಬೇಕು. ಅವರು ಏನೇ ಮಾಡಿದರೂ ಬಿಜೆಪಿ ನಿತ್ಯ-ನೂತನ. ನಮ್ಮ ಸಂಘಟನೆ, ಬೂತ್ ಕಮಿಟಿಗಳು ನಡೆಯುತ್ತಿರುತ್ತೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಜೆಡಿಎಸ್ ನಡೆ ನಮಗೆ ಆಶ್ಚರ್ಯ, ಕತೂಹಲ ಅನ್ನಿಸಲ್ಲ. ಅವರು ಈಗ ತೋಟದ ಮನೆಯಲ್ಲಿ ಸಂಘಟನೆ ಮಾಡಬೇಕು. ನಮ್ಮದು ರಾಷ್ಟ್ರೀಯ ಪಕ್ಷ. ತತ್ವ-ಸಿದ್ದಾಂತ ಇಟ್ಕೊಂಡು ಪಕ್ಷ ಬೆಳೆಸಿಕೊಂಡು ಬಂದಿದ್ದೇವೆ. ಅದು ನಿತ್ಯ ನರಂತರ ನಡೆಯುತಿರುತ್ತೆ ಎಂದರು. ಇದನ್ನೂ ಓದಿ: ಕಾಲೇಜು ಆವರಣದಲ್ಲಿಯೇ ಯುವತಿಯ ಕುತ್ತಿಗೆ ಸೀಳಿದ ಭಗ್ನ ಪ್ರೇಮಿ
ಜೆಡಿಎಸ್ ಮುಂದಿನ ವಿಧಾನಸಭಾ ಚುನಾವಣೆಗೆ 120 ಮಿಷನ್ ಬಗ್ಗೆ ನಸುನಕ್ಕ ಆರಗ ಜ್ಞಾನೇಂದ್ರ, ಅವರು ಒಂದು ರಾಜಕೀಯ ಪಕ್ಷವಾಗಿ ಅವರ ಗುರಿ ಇಟ್ಟುಕೊಳ್ಳಬೇಕು. ಅದು ಅವರ ಗುರಿ. ಇದೇ ವೇಳೆ, ದತ್ತಪೀಠದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತೀರ್ಪಿನ ಕಾಪಿಯನ್ನ ನಾನು ಓದಿಲ್ಲ. ಆ ತೀರ್ಪಿನ ಆಶಯದಂತೆ ನಮ್ಮ ಸರ್ಕಾರ ಮುಂದಿನ ಕ್ರಮ ಕೈಗೊಳ್ಳುತ್ತದೆ. ಜಿಲ್ಲಾಡಳಿತ ಕೂಡ ಸಮರ್ಪಕವಾಗಿ ಅದರ ನಿರ್ವಹಣೆ ಮಾಡುತ್ತದೆ. ಆ ಕಾಪಿ ಬಂದ ಕೂಡಲೇ ಪರಿಶೀಲನೆ ಮಾಡುತ್ತೇನೆ. ಹಿಂದೂ ಅರ್ಚಕರ ನೇಮಕ ಕುರಿತಂತೆ ಕಾನೂನು ತಜ್ಞರ ಜೊತೆ ಸಲಹೆ ಪಡೆದು ಸರ್ಕಾರ ಸೂಕ್ತ ಕ್ರಮಕೈಗೊಳ್ಳುತ್ತೆ ಎಂದರು.