ಮುಂಬೈ: ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರನ್ನು (Anna Hazare) ಮುಂಬೈನ (Mumbai) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿರ್ಜಲೀಕರಣ ಹಾಗೂ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ಮೂಲಗಳ ಪ್ರಕಾರ, 87 ವರ್ಷದ ಅಣ್ಣಾ ಹಜಾರೆಯವರಿಗೆ ಆರಂಭದಲ್ಲಿ ಅವರ ಸ್ವಗ್ರಾಮ ರಾಳೇಗಾಂಧಿ ಸಿದ್ಧಿ ಬಳಿಯಿರುವ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರಿಗೆ ತೀವ್ರವಾದ ವೈರಲ್ ಸೋಂಕು, ದೇಹದಲ್ಲಿ ನೀರಿನಂಶ ಕಡಿಮೆಯಾಗಿರುವುದು (ನಿರ್ಜಲೀಕರಣ) ಮತ್ತು ಮೂತ್ರಪಿಂಡದ ತೊಂದರೆಗಳು ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತುರ್ತಾಗಿ ಮುಂಬೈಗೆ ಕರೆತರಲಾಗಿದೆ. ಇದನ್ನೂ ಓದಿ: KPSC ಹಗರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿಕೆಟ್ ಪತನವಾಗುತ್ತೆ – ಆರ್. ಅಶೋಕ್ ಹೊಸ ಬಾಂಬ್

ಪ್ರಸ್ತುತ ಡಾ. ಗೌತಮ್ ಭನ್ಸಾಲಿ ಅವರ ಆರೈಕೆಯಲ್ಲಿ ಅಣ್ಣಾ ಹಜಾರೆಯವರು ಐಸಿಯುವಿನಲ್ಲಿ ನಿರಂತರ ವೈದ್ಯಕೀಯ ನಿಗಾದಲ್ಲಿದ್ದಾರೆ. ವೈದ್ಯಕೀಯ ತಜ್ಞರು ವಿವರವಾದ ಪರೀಕ್ಷೆಗಳನ್ನು ನಡೆಸುತ್ತಿದ್ದು, ವರದಿ ಬಂದ ನಂತರ ಮುಂದಿನ ಚಿಕಿತ್ಸೆಯ ಬಗ್ಗೆ ನಿರ್ಧರಿಸಲಾಗುತ್ತದೆ. ಅವರ ಆರೋಗ್ಯದ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ದೇಶಾದ್ಯಂತ ಅವರ ಬೆಂಬಲಿಗರು ಹಾಗೂ ಹಿತೈಷಿಗಳು ಆತಂಕ ವ್ಯಕ್ತಪಡಿಸಿದ್ದು, ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಸಂಪೂರ್ಣ ವೈದ್ಯಕೀಯ ಪರೀಕ್ಷೆಗಳು ಮುಗಿದ ಬಳಿಕ ಅವರ ಆರೋಗ್ಯದ ಕುರಿತು ಅಧಿಕೃತ ಪ್ರಕಟಣೆ ಹೊರಬರುವ ನಿರೀಕ್ಷೆಯಿದೆ.
ಹಜಾರೆ ಅವರು ಭಾರತದ ಪ್ರಮುಖ ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಮತ್ತು ಸಮಾಜ ಸುಧಾರಕರಲ್ಲಿ ಒಬ್ಬರು. ಮಹಾರಾಷ್ಟ್ರದ ತಮ್ಮ ಸ್ವಗ್ರಾಮವಾದ ರಾಳೇಗಾಂಧಿ ಸಿದ್ಧಿಯನ್ನು ಜಲಾನಯನ ಅಭಿವೃದ್ಧಿ, ಅರಣ್ಯೀಕರಣ, ಗ್ರಾಮೀಣ ಸ್ವಾವಲಂಬನೆ ಮತ್ತು ವ್ಯಸನ ನಿರ್ಮೂಲನೆಯ ಮುಂದಾಳತ್ವದ ಮೂಲಕ ಮಾದರಿ ಗ್ರಾಮವಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು. ಇದನ್ನೂ ಓದಿ: KPSC Scam | ಕಡ್ಲೆಪುರಿಯಂತೆ ಸಿಕ್ಕಸಿಕ್ಕವರಿಗೆ ಪ್ರಶ್ನೆಪತ್ರಿಕೆ ಸೇಲ್ – ಕೋಟಿಗೆ ಶುರುವಾದ ಡೀಲ್ ಕೊನೆಗೆ 40 ಲಕ್ಷಕ್ಕೆ ಇಳಿಕೆ!
