ಬೆಳಗಾವಿ: ಕಳೆದ 9 ದಿನಗಳ ಕಾಲ ಬೆಂಗಳೂರಿನಿಂದ ತಿರುಪತಿ ತಿಮ್ಮಪ್ಪನ ಸನ್ನಿಧಾನದವರೆಗೆ ಪಾದಯಾತ್ರೆಯನ್ನು ಕೈಗೊಂಡು ಅದನ್ನು ಯಶಸ್ವಿಯಾಗಿ ಪೂರೈಸಿದ ಕ್ಷೇತ್ರದ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಶನಿವಾರ ಸಂಜೆ 4 ಗಂಟೆಗೆ ಪಟ್ಟಣದ ಶಿವಸ್ಮಾರಕ ಸಭಾಗೃಹದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸತ್ಕರಿಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾದೇವ ಕೋಳಿ ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸನ್ಮಾನ ಕಾರ್ಯಕ್ರಮಕ್ಕೂ ಮುಂಚೆ ಶಾಸಕರು ಪಟ್ಟಣದ ಜಗಜ್ಯೋತಿ ಬಸವೇಶ್ವರ ವೃತ್ತದ ಬಸವೇಶ್ವರ ಪುತ್ಥಳಿ, ಡಾ.ಬಿ.ಆರ್ ಅಂಬೇಡ್ಕರ್ ಉದ್ಯಾನವನದ ಡಾ.ಅಂಬೇಡ್ಕರ್ ಪುತ್ಥಳಿ ಮತ್ತು ಶಿವಸ್ಮಾರಕ ವೃತ್ತದ ಛತ್ರಪತಿ ಶಿವಾಜಿ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ವತಿಯಿಂದ ಶಾಸಕರನ್ನು ಮತ್ತು ಅವರೊಂದಿಗೆ ಪಾದಯಾತ್ರೆ ಕೈಗೊಂಡವರನ್ನು ಸನ್ಮಾನಿಸಲಾಗುತ್ತದೆ ಎಂದು ವಿವರಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಚಂಬಣ್ಣ ಹೊಸಮನಿ, ಅಶೋಕ ಅಂಗಡಿ, ಮಹಾಂತೇಶ ರಾಹುತ, ಮಲ್ಲೇಶಿ ಪೋಳ, ಮಹಾಂತೇಶ ಕಲ್ಯಾಣಿ, ದೇಮಣ್ಣ ಬಸರಿಕಟ್ಟಿ, ಅನಿತಾ ದಂಡಗಲ್, ಗುಡುಸಾಬ ತೇಕಡಿ, ಜಾಕಿ ಫರ್ನಾಂಡಿಸ್, ಗೀತಾ ಅಂಬಡಗಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.