ಚಾಮರಾಜನಗರ: ಕಳ್ಳ ಎಂದು ಅನುಮಾನಿಸಿ ಅಮಾಯಕ ಯುವಕನನ್ನು ಪೊಲೀಸರು ಕರೆದೊಯ್ದು ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರದಲ್ಲಿ(ChamarajaNagar) ನಡೆದಿದೆ.
ನಂಜನಗೂಡು ತಾಲೂಕಿನ ಕೋಣನಪಾಳ್ಯ ಗ್ರಾಮದ ದಿಲೀಪ್ ಹಲ್ಲೆಗೊಳಗಾದ ಯುವಕ. ಈತನನ್ನು ಚಾಮರಾಜನಗರ ಗ್ರಾಮಾಂತರ ಪೊಲೀಸರು ಚಿನ್ನದ ಕಳ್ಳ(Thief) ಎಂದು ಭಾವಿಸಿ ಠಾಣೆಗೆ ಕರೆತಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಳ್ಳತನ ಮಾಡಿರುವ ವ್ಯಕ್ತಿ ಧರಿಸಿರುವ ಶರ್ಟ್ ತರಹವೇ ನಿನ್ನ ಶರ್ಟ್(Shirt) ಇದೆ. ಹೀಗಾಗಿ ನೀನೇ ಕಳ್ಳತನ ಮಾಡಿದ್ದೀಯಾ. ನಿಜ ಒಪ್ಪಿಕೋ ಎಂದು ಹೇಳಿ ಮನಸ್ಸೋ ಇಚ್ಛೆ ಥಳಿಸಿದ್ದಾರೆ.
ಯುವಕ ಎಷ್ಟೇ ಬೇಡಿಕೊಂಡರು ಪೊಲೀಸರಿಗೆ ಕರುಣೆಯೇ ಬಂದಿಲ್ಲ. ಆತನ ಮೇಲೆ ಎಷ್ಟೆಲ್ಲಾ ಕ್ರೌರ್ಯ ಮೆರೆಯಬಹುದೋ ಅಷ್ಟನ್ನು ಮಾಡಿದ್ದಾರೆ. ಕೊನೆಗೆ ಪೊಲೀಸರ ಹಿಂಸೆ ತಾಳಲಾರದೇ ನಾನೇ ಕಳ್ಳತನ ಮಾಡಿದ್ದೇನೆ. ಕಳ್ಳತನ ಮಾಡಿದ ಚಿನ್ನವನ್ನು ಮನೆಯಲ್ಲಿಟ್ಟಿದ್ದೇನೆ ಎಂದು ಹೇಳಿದ್ದಾನೆ. ಆಗ ದಿಲೀಪ್ನನ್ನು ಆತನ ಸ್ವಗ್ರಾಮಕ್ಕೆ ಪೊಲೀಸರು ಕರೆತಂದಾಗ ಆತ ಗ್ರಾಮದವರ ಎದುರು ತಾನು ಕಳ್ಳತನ ಮಾಡಿಲ್ಲ. ಪೊಲೀಸರು ಬಲವಂತದಿಂದ ಹೇಳಿಸಿದರು ಎಂದು ಹೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಾಗ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಹಲ್ಲೆಗೊಳಗಾದ ದಿಲೀಪ್ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಪೋಷಕರು ಹೇಳುವ ಪ್ರಕಾರ ದಿಲೀಪ್ ಖಾಸಗಿ ಸಂಘಗಳು ನೀಡುವ ಸಾಲದ ಹಣವನ್ನು ವಸೂಲಿ ಮಾಡುವ ಕೆಲಸ ಮಾಡಿಕೊಂಡಿದ್ದ. ಆದರೆ ಏಕಾಏಕಿ ಪೊಲೀಸರು ಈತನ ಮೇಲೆ ಕಳ್ಳತನದ ಆರೋಪ ಹೊರಿಸಿದ್ದಾರೆ. ಅಲ್ಲದೇ ಮೈಮೇಲೆಲ್ಲಾ ಬಾಸುಂಡೆ ಬರುವ ರೀತಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈತನಿಗೆ ಏನಾದರೂ ಹೆಚ್ಚು ಕಡಿಮೆಯಾದ್ರೆ ಆತನ ಜೀವಕ್ಕೆ ಹೊಣೆ ಯಾರು ಎಂದು ಪ್ರಶ್ನೆ ಮಾಡುತ್ತಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರದ ಹಗರಣ ಸದನದಲ್ಲಿ ಬಿಚ್ಚಿಡುತ್ತೇನೆ: ಕುಮಾರಸ್ವಾಮಿ
ಒಟ್ಟಾರೆ ಪೊಲೀಸರು(Police) ವಿಚಾರಣೆ ಮಾಡದೇ ಅಮಾಯಕ ಯುವಕನ ಮೇಲೆ ಕಳ್ಳತನದ ಆರೋಪ ಹೊರಿಸಿ ಹಿಗ್ಗಾಮುಗ್ಗಾ ಥಳಿಸಿರುವುದು ಅವರ ಕ್ರೌರ್ಯವನ್ನು ಎತ್ತೆ ತೋರಿಸುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕಾದ ಪೊಲೀಸರೇ ತಪ್ಪು ಮಾಡಿರುವುದು ನಿಜಕ್ಕೂ ದುರಂತ. ಇದನ್ನೂ ಓದಿ: ಲೋಕಾಯುಕ್ತ ಅಬ್ಬರ ಶುರು – ಮೊದಲ ದಾಳಿಯಲ್ಲೇ BBMP ಜಂಟಿ ಆಯುಕ್ತ ಅರೆಸ್ಟ್