ಬೆಂಗಳೂರು: ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಲೇ ಇದೆ. ಈ ರಣಬಿಸಿಲಿಗೆ ಭೂಮಿ ಕಾದು ಕೆಂಡವಾಗಿದ್ದು, ಜನರು ಹೈರಾಣಾಗಿದ್ದಾರೆ. ಈ ಸನ್ ಸ್ಟ್ರೋಕ್ ಜನರಿಗೆ ಅಷ್ಟೇ ಅಲ್ಲದೆ ವರುಣನಿಗೂ ತಟ್ಟಿದೆ.
ಈಗ ಸೂರ್ಯ ಭಗ ಭಗಿಸುತ್ತಿದ್ದು, ಭೂಮಿ ಧಗಧಗಿಸುತ್ತಿದೆ. ಆದರೆ ಭಾನುವಾರ ಹಾಗೂ ಸೋಮವಾರ ರಾಜ್ಯದ ಕೆಲವು ಭಾಗಗಳಲ್ಲಿ ಹಗುರ, ಸಾಧಾರಣ ಮಳೆಯಾಗಿದೆ. ಈ ಮಳೆಗೆ ಮೇಲ್ಮೈ ಸುಳಿಗಾಳಿ ಹಾಗೂ ವಾತಾವರಣದಲ್ಲಿ ಗಾಳಿಯ ಒತ್ತಡವೇ ಕಾರಣ. ಮುಂದಿನ ಎರಡು ದಿನಗಳಲ್ಲಿ ಕೆಲವು ಜಿಲ್ಲೆಗಳ ಹಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಮಳೆಯಿಂದ ಬಿಸಿಲಿನ ಪ್ರಮಾಣ ಮಾತ್ರ ಕಡಿಮೆ ಆಗಬಹುದು. ಅದನ್ನು ಬಿಟ್ಟರೆ ಉಷ್ಣಾಂಶದಲ್ಲಿ ವ್ಯತ್ಯಾಸ ಇಲ್ಲವೆಂದು ವಿಜ್ಞಾನಿಗಳು ಹೇಳಿದ್ದಾರೆ. ರಾಜ್ಯದ 7ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು 42 ಡಿಗ್ರಿಗೂ ಅಧಿಕ ತಾಪಮಾನ ದಾಖಲಾಗಿತ್ತು. ಬೆಂಗಳೂರಲ್ಲಿ 36 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಿತ್ತು. ಸೂರ್ಯನ ಝಳವನ್ನು ತಪ್ಪಿಸಿಕೊಳ್ಳಲು ಜನರು ತಂಪು ಪಾನಿಯಗಳಾದ ಜ್ಯೂಸ್, ಐಸ್ ಕ್ರೀಂ, ಮಡಿಕೆ ನೀರು, ಎಳ ನೀರುಗಳ ಮೊರೆ ಹೋಗುತ್ತಿದ್ದಾರೆ.
ಮಾರ್ಚ್ ಅಂತ್ಯದಲ್ಲಿಯೇ ಹೀಗಾದ್ರೆ ಇನ್ನೂ ಎರಡು ತಿಂಗಳು ಹೇಗಪ್ಪಾ ಬದುಕೋದು ಎಂದು ಜನರು ಯೋಚನೆಯಲ್ಲಿದ್ದಾರೆ.