ಅಲಹಾಬಾದ್: ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದೆ. ಮೆರಿಟ್ ಗಳ ಆಧಾರದ ಮೇಲೆ ಜಾಮೀನು ತಿರಸ್ಕರಿಸಲಾಗಿದೆ ಎಂದು ಅಲಹಾಬಾದ್ ಕೋರ್ಟ್ ಹೇಳಿದೆ.
ಜಾಮೀನು ತಿರಸ್ಕರಿಸಿದ ಕೆಳ ಹಂತದ ನ್ಯಾಯಾಲಯದ ಆದೇಶ ವಿರುದ್ಧ ಸಿದ್ದಿಕ್ ಕಪ್ಪನ್ ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಕ್ರಿಶನ್ ಪಹಲ್ ಜಾಮೀನು ಅರ್ಜಿ ವಜಾ ಮಾಡಿದ್ದಾರೆ.
ಸಿದ್ದಿಕ್ ಕಪ್ಪನ್, ಮಲಯಾಳಂ ಸುದ್ದಿ ಪೊರ್ಟಲ್ನ ವರದಿಗಾರರಾಗಿದ್ದರು. 2020 ಅಕ್ಟೋಬರ್ ನಲ್ಲಿ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡಲು ಅವರು ಹತ್ರಾಸ್ ಗೆ ತೆರಳುತ್ತಿದ್ದರು. ಸಿದ್ದಿಕ್ ಸೇರಿದಂತೆ ಮೂವರನ್ನು ಹಾದಿ ಮಧ್ಯದಲ್ಲೆ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್ನ ಮುಂದಿನ CJI ಆಗಿ ಯು.ಯು.ಲಲಿತ್ ಹೆಸರು ಶಿಫಾರಸು
ಬಂಧಿತ ಪತ್ರಕರ್ತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ), ಸೆಕ್ಷನ್ 124 ಎ (ದೇಶದ್ರೋಹ), ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಸೆಕ್ಷನ್ 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಸೆಕ್ಷನ್ 17 ಮತ್ತು 18 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಯಿತು. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 65, 72 ಮತ್ತು 75 ರ ಧಾರ್ಮಿಕ ಭಾವನೆಗಳ ಕದಡುವ ಹುನ್ನಾರವನ್ನು ಸೇರಿಸಲಾಗಿದೆ.
ಕಪ್ಪನ್ ಮತ್ತು ಇತರ ಸಹ-ಆರೋಪಿಗಳು ಉತ್ತರ ಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ವರದಿ ಮಾಡಲು ಹೊರಟಾಗ ಕಾನೂನನ್ನು ಮತ್ತು ಇತರ ಪರಿಸ್ಥಿತಿಯನ್ನು ಭಂಗಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಮಥುರಾ ನ್ಯಾಯಾಲಯವು ಜುಲೈ 2021 ರಲ್ಲಿ ಕಪ್ಪನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.