ಹೈದರಾಬಾದ್: ಎಐಎಂಐಎಂ (AIMIM) ಪಕ್ಷದ ಅಕ್ಬರುದ್ದೀನ್ ಓವೈಸಿ ಅವರನ್ನು ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವುದನ್ನು ವಿರೋಧಿಸಿ ತೆಲಂಗಾಣ ಬಿಜೆಪಿ ಇಂದು (ಶುಕ್ರವಾರ) ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿದೆ. ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸುವ ಜವಾಬ್ದಾರಿಯನ್ನು ಹಂಗಾಮಿ ಸ್ಪೀಕರ್ಗೆ ವಹಿಸಲಾಗಿತ್ತು.
ವಿಧಾನಸಭಾ ಚುನಾವಣೆಯಲ್ಲಿ ಗೋಶಾಮಹಲ್ನಿಂದ ಗೆದ್ದಿದ್ದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರು, ಎಐಎಂಐಎಂ ಮುಂದೆ ಜೀವಂತ ಇರುವವರೆಗೂ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ವೀಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಪೂರ್ಣಾವಧಿ ಸ್ಪೀಕರ್ ನೇಮಕವಾದ ಬಳಿಕವಷ್ಟೇ ಪ್ರಮಾಣ ವಚನ ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಹಂಗಾಮಿ ಸ್ಪೀಕರ್ ಆಗಿ AIMIM ಶಾಸಕ ಅಕ್ಬರುದ್ದೀನ್ ಓವೈಸಿ ಪ್ರಮಾಣ ವಚನ
ಈ ಹಿಂದೆ ಹಿಂದೂ ವಿರೋಧಿ ಹೇಳಿಕೆ ನೀಡಿದ ವ್ಯಕ್ತಿಯ (ಅಕ್ಬರುದ್ದೀನ್ ಓವೈಸಿ) ಮುಂದೆ ನಾನು ಪ್ರಮಾಣ ವಚನ ಸ್ವೀಕರಿಸಬಹುದೇ ಎಂದು ರಾಜಾ ಸಿಂಗ್ ಕೇಳಿದ್ದಾರೆ. ಈಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದಿತ್ತು. ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಜಿ ಕಿಶನ್ ರೆಡ್ಡಿ ಮಾತನಾಡಿ, ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವ ಸಂಪ್ರದಾಯ. ಅದಕ್ಕೆ ವಿರುದ್ಧವಾದ ಓವೈಸಿ ನೇಮಕವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ನಿಲುವು ವ್ಯಕ್ತಪಡಿಸಿದ್ದಾರೆ.
ಒವೈಸಿ ಅವರು ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಚುನಾಯಿತ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿ ಶಾಸಕರು ಸಮಾರಂಭ ಬಹಿಷ್ಕರಿಸಿದ್ದಾರೆ. ಇದನ್ನೂ ಓದಿ: ಐಸಿಸ್ ಉಗ್ರರೊಂದಿಗೆ ನಂಟು; ಬೆಂಗಳೂರು ಸೇರಿ ದೇಶದ ಹಲವೆಡೆ NIA ದಾಳಿ
ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿರುವ ಕಾಂಗ್ರೆಸ್ನ ರೇವಂತ್ ರೆಡ್ಡಿ ಅವರು ತಮ್ಮ ಹಿಂದಿನ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಂತೆ ಎಐಎಂಐಎಂಗೆ ಹೆದರುತ್ತಾರೆ. ಹೀಗಾಗಿ ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ರಾಜಾ ಸಿಂಗ್ ಆರೋಪಿಸಿದ್ದಾರೆ.
ಹಂಗಾಮಿ ಸ್ಪೀಕರ್ ಮಾಡಬಹುದಾದ ಅನೇಕ ಹಿರಿಯ ಶಾಸಕರಿದ್ದಾರೆ. ಆದರೆ ಹೊಸ ಮುಖ್ಯಮಂತ್ರಿ ಅಲ್ಪಸಂಖ್ಯಾತರು ಮತ್ತು ಎಐಎಂಐಎಂ ನಾಯಕರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.