ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನ-ವಾಹನಗಳ ನಡುವಿನ ಅಪಘಾತ ತಪ್ಪಿಸಲು AI ಆಧಾರಿತ ಸ್ಮಾರ್ಟ್ ಸಿಸ್ಟಮ್ ಜಾರಿ

2 Min Read

– ಕ್ರಾಸ್ ಸರ್ವಿಸ್ ರಸ್ತೆಗಳಲ್ಲಿ ನೈಜ ಸಮಯದ ಮೇಲ್ವಿಚಾರಣೆ
– ಅಪಘಾತ ತಡೆಗೆ ಅತ್ಯಾಧುನಿಕ ಪರಿಹಾರ

ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ (Kempegowda Airport) ವಿಮಾನ ಮತ್ತು ವಾಹನಗಳ ನಡುವಿನ ಅಪಘಾತ ತಪ್ಪಿಸಲು ಎಐ (AI) ಆಧಾರಿತ ಸ್ಮಾರ್ಟ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ.

ವಿಮಾನ ನಿಲ್ದಾಣದ ವಾಯುಯಾನ ಪ್ರದೇಶದಲ್ಲಿ ಕಾರ್ಯಾಚರಣೆ ಸುರಕ್ಷತೆ ಮತ್ತು ನಿಯಂತ್ರಣವನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು (BIAL) ಸಮಗ್ರವಾದ `ಸ್ಮಾರ್ಟ್ ಏರ್‌ಸೈಡ್ ಸುರಕ್ಷತಾ ವ್ಯವಸ್ಥೆ’ಯನ್ನು ಪರಿಚಯಿಸಿದೆ. ಇದನ್ನೂ ಓದಿ: ಭಾರತ ಯಾವುದನ್ನೂ ಕ್ಷಮಿಸಲ್ಲ – ʻಸಿಂಧೂರʼ ಸಮರಕ್ಕೆ 1 ವರ್ಷ, ವಿಶೇಷ ವಿಡಿಯೋ ಹಂಚಿಕೊಂಡ ವಾಯುಪಡೆ

ವಿಮಾನ ನಿಲ್ದಾಣದ ಅತ್ಯಂತ ಮಹತ್ವದ ಪ್ರದೇಶವಾದ ಏರ್‌ಸೈಡ್ ವಲಯಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸುಧಾರಿತ ತಾಂತ್ರಿಕ ನಿಯಂತ್ರಣವನ್ನು ಸಾಧಿಸಲು ಈ ವ್ಯವಸ್ಥೆಯು ಮಹತ್ವದ ಹೆಜ್ಜೆಯಾಗಿದೆ. ವಿಮಾನಗಳು ಮತ್ತು ನೆಲದ ಮೇಲಿನ ವಾಹನಗಳ ಸಂಚಾರ ಸಂಧಿಸುವ ಕ್ರಾಸ್ ಸರ್ವಿಸ್ ರಸ್ತೆಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಕೃತಕ ಬುದ್ಧಿಮತ್ತೆ ಆಧಾರಿತ ಕಂಪ್ಯೂಟರ್ ವಿಷನ್, ಇಂಟೆಲಿಜೆಂಟ್ ಆಟೋಮೇಷನ್ ಮತ್ತು ಕೇಂದ್ರೀಕೃತ ನಿಯಂತ್ರಣವನ್ನು ಒಳಗೊಂಡಿದ್ದು, ಸುರಕ್ಷಿತ ಸಂಚಾರ ನಿರ್ವಹಣೆ, ಕಾರ್ಯಕ್ಷಮತೆಯ ಹೆಚ್ಚಳ ಮತ್ತು ನಿಖರ ಕಾರ್ಯಾಚರಣೆಯನ್ನು ಸಾಧ್ಯವಾಗಿಸುತ್ತದೆ.

ವಿಮಾನ ನಿಲ್ದಾಣದ ಕಾರ್ಯಾಚರಣೆಯಲ್ಲಿ ಕ್ರಾಸ್ ಸರ್ವಿಸ್ ರಸ್ತೆಗಳು ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿದ್ದು, ಇಲ್ಲಿ ವಿಮಾನ ಮತ್ತು ವಾಹನಗಳ ಸಂಚಾರದ ನಡುವೆ ನಿಖರ ಹಾಗೂ ಸುಗಮ ಸಮನ್ವಯದ ಅಗತ್ಯವಿರುತ್ತದೆ. ಈ ಹಿಂದಿನ ವ್ಯವಸ್ಥೆಗಳಲ್ಲಿ ಇನ್ಸೆಟ್ ಲೈಟ್‌ಗಳನ್ನು ಕಾರ್ಯಗತಗೊಳಿಸಲು ಮಾನವ ಹಸ್ತಕ್ಷೇಪದ ಅಗತ್ಯವಿತ್ತು. ಈ ಅವಲಂಬನೆಯು ಕಾರ್ಯಾಚರಣೆಯ ದಕ್ಷತೆಯನ್ನು ಸೀಮಿತಗೊಳಿಸುವುದಲ್ಲದೆ, ವಿಳಂಬಕ್ಕೆ ಕಾರಣವಾಗುವ ಸಾಧ್ಯತೆಯನ್ನೂ ಹೊಂದಿತ್ತು. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು, ಈ ವ್ಯವಸ್ಥೆಯು ಕಾರ್ಯಾಚರಣೆಯ ನೈಜ ಸಮಯದ ಮಾಹಿತಿಯನ್ನು ಒದಗಿಸುತ್ತದೆ.

ದೃಶ್ಯ ವಿಶ್ಲೇಷಣಾ ತಂತ್ರಜ್ಞಾನದಿಂದ ವಾಹನಗಳ ಚಲನವಲನವನ್ನು ಗುರುತಿಸುವುದು, ಅಪಾಯದ ಮೌಲ್ಯಮಾಪನ ಮಾಡುವುದು ಹಾಗೂ ಸ್ವಯಂಚಾಲಿತ ಸೂಚನೆಗಳನ್ನು ನೀಡುವುದು. ಈ ವ್ಯವಸ್ಥೆಯ ಪ್ರಮುಖ ಅಂಶಗಳಾಗಿವೆ. ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾಗಳು ಕ್ರಾಸ್ ಸರ್ವಿಸ್ ರಸ್ತೆಗಳಲ್ಲಿ ನಡೆಯುವ ಚಟುವಟಿಕೆಗಳನ್ನು ಗುರುತಿಸಿ, ನೈಜ ಸಮಯದಲ್ಲಿ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಿ, ಅಗತ್ಯವಾದ ಅಧಿಕೃತ ಮಾಹಿತಿಯನ್ನು ಒದಗಿಸುತ್ತದೆ. ಈ ಕೇಂದ್ರೀಕೃತ ಮೇಲ್ವಿಚಾರಣೆ ಮತ್ತು ವಿಶ್ಲೇಷಣಾ ವೇದಿಕೆಯು ಪ್ರತಿಯೊಂದು ವಿದ್ಯಮಾನವನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವ ಮೂಲಕ ಆಡಳಿತಾತ್ಮಕ ನಿಯಂತ್ರಣ ಮತ್ತು ಪಾರದರ್ಶಕತೆಯನ್ನು ಇನ್ನಷ್ಟು ಬಲಪಡಿಸುತ್ತದೆ.

ಕಾರ್ಯಾಚರಣೆಯಲ್ಲಿ ತಂತ್ರಜ್ಞಾನವನ್ನು ಮೇಳೈಸುವ ಮೂಲಕ, ಈ ವ್ಯವಸ್ಥೆಯು ವಿಮಾನಗಳು ಮತ್ತು ಭೂ ವಾಹನಗಳ ನಡುವೆ ದತ್ತಾಂಶ ಆಧಾರಿತ ಸುರಕ್ಷಿತ ಅಂತರವನ್ನು ನಿರ್ಮಿಸುತ್ತದೆ. ಇದು ವಿಶೇಷವಾಗಿ ರಾತ್ರಿ ವೇಳೆ ಮತ್ತು ಕಡಿಮೆ ಗೋಚರತೆಯ ಸಂದರ್ಭಗಳಲ್ಲಿ ಮಾನವ ಸಹಜ ತಪ್ಪುಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ನಿಖರವಾದ ಸಿಗ್ನಲ್ ವ್ಯವಸ್ಥೆಯು ಸಂಚಾರದ ಹರಿವನ್ನು ಸುಧಾರಿಸುವುದಲ್ಲದೆ, ಅನಗತ್ಯ ಅಡೆತಡೆಗಳನ್ನು ನಿಯಂತ್ರಿಸಿ ವಿಮಾನಗಳ ಕಾರ್ಯಾಚರಣೆಯ ದಕ್ಷತೆಯನ್ನು ವೃದ್ಧಿಸುತ್ತದೆ. ಅಲ್ಲದೆ, ಈ ವ್ಯವಸ್ಥೆಯು ಭವಿಷ್ಯದಲ್ಲಿ ಅಂಕಿ-ಅಂಶ ಆಧಾರಿತ ಸುರಕ್ಷತಾ ವಿಶ್ಲೇಷಣೆಗೆ ಅವಕಾಶ ಒದಗಿಸಿ, ಅಪಾಯ ನಿರೀಕ್ಷೆ, ಗರಿಷ್ಠ ಸಂಚಾರ ಸಮಯ ನಿರ್ವಹಣೆ ಹಾಗೂ ನಿಯಮ ಪಾಲನೆ ಸುಧಾರಣೆಗಾಗಿ ಸಹಕಾರಿಯಾಗುತ್ತದೆ. ಈ ಉಪಕ್ರಮದ ಮೂಲಕ ಸುಧಾರಿತ ತಂತ್ರಜ್ಞಾನದ ಮೂಲಕ ಸುರಕ್ಷತೆಯನ್ನು ಹೆಚ್ಚಿಸುವ, ಕಾರ್ಯಾಚರಣೆಯ ಉತ್ಕೃಷ್ಟತೆಯನ್ನು ಸಾಧಿಸುವ ಮತ್ತು ಮುಂದಿನ ಪೀಳಿಗೆಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ರೂಪಿಸುವ ಕುರಿತು ಬಿಐಎಎಲ್ ಹೊಂದಿರುವ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.ಇದನ್ನೂ ಓದಿ: ವಠಾರದ ಅಂಕಲ್‌ಗೆ ಪಕ್ಕದ್ಮನೆ ಆಂಟಿ ಮೇಲೆ ಆಸೆ – ಹಿಂಬದಿಯಿಂದ ತಬ್ಬಿಕೊಂಡು ಅವಾಂತರ

Share This Article