ಬೆಂಗಳೂರು: 45 ವರ್ಷಗಳ ನಂತರ ಹೊಸ ರೂಪದಲ್ಲಿ ನಾಗರಹಾವು ತೆರೆಗೆ ಬರುತ್ತಿದ್ದು, ಸಾಹಸ ಸಿಂಹ ಅಭಿವನ ಭಾರ್ಗವ ವಿಷ್ಣುವರ್ಧನ್ ಪುಣ್ಯ ತಿಥಿಯಂದು ಸಿನಿಮಾ ಬಿಡುಗಡೆಯಾಗಲಿದೆ.
ನಾಗರಹಾವು ರಿಲೀಸ್ ಆಗಿ ಬರೋಬ್ಬರಿ 45 ವರ್ಷಗಳಾಗಿವೆ. ಆದರೆ ಈಗ ಅವರ ಪುಣ್ಯತಿಥಿ ಪ್ರಯುಕ್ತ ಮತ್ತೆ ನಾಗರಹಾವು ರೀ ರಿಲೀಸ್ ಆಗುತ್ತಿದ್ದು, ತೆರೆಯ ಮೇಲೆ ರಾಮಾಚಾರಿ ಮತ್ತು ಚಾಮಯ್ಯ ಮೇಷ್ಟ್ರು ಮತ್ತೆ ಮೋಡಿ ಮಾಡಲು ಬರುತ್ತಿದ್ದಾರೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ ನಾಗರಹಾವು ಸಿನಿಮಾ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆಯನ್ನು ಪಡೆದಿತ್ತು. ಅದೇ ಮೊದಲ ಬಾರಿಗೆ ನಾಯಕ ನಟರಾಗಿ ವಿಷ್ಣುವರ್ಧನ್ ಅಭಿನಯಿಸಿದ್ದು, ನಾಗರಹಾವು ಸಿನಿಮಾ ಅವರಿಗೆ ಹೆಸರು ಮತ್ತು ಖ್ಯಾತಿಯನ್ನು ತಂದುಕೊಟ್ಟಿತ್ತು. ಈಗ ನಾಗರಹಾವು ಸಿನಿಮಾವನ್ನು ವೀರಾಸ್ವಾಮಿಯವರ ಮಗ ಬಾಲಾಜಿ ಅವರು ರೀ ರಿಲೀಸ್ ಮಾಡುತ್ತಿದ್ದು, ವಿಶೇಷವಾಗಿ ಡಿಟಿಎಸ್ ಸೌಂಡ್ ಎಫೆಕ್ಟ್ ನೊಂದಿಗೆ ಬಿಡುಗಡೆಯಾಗುತ್ತಿದೆ.
ಈ ಹಿಂದೆ ಕಸ್ತೂರಿ ನಿವಾಸ ಚಿತ್ರ ಕೂಡ ಹೊಸ ರೂಪದಲ್ಲಿ ಬಿಡುಗಡೆಯಾಗಿತ್ತು. ಈಗ ಇದೇ ತಿಂಗಳು ತೆರೆಯ ಮೇಲೆ ನಾಗರಹಾವು ಸಿನಿಮಾ ರಾರಾಜಿಸಲಿದೆ. ಡಿಸೆಂಬರ್ ತಿಂಗಳಲ್ಲಿ ವಿಷ್ಣು ಅಗಲಿದ್ದರು. ಹಾಗಾಗಿ ಅವರ ಪುಣ್ಯತಿಥಿಯ ಪ್ರಯುಕ್ತ ಇದೇ ತಿಂಗಳು ಮತ್ತೆ ನಾಗರಹಾವು ಚಿತ್ರ ಬಿಡುಗಡೆಯಾಗುತ್ತಿದೆ.