ಮಂಡ್ಯ: ಚಿತ್ರ ನಟಿ ಅಮೂಲ್ಯ ಪತಿ ಜಗದೀಶ್ ರೊಂದಿಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಅಮವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಅಮವಾಸ್ಯೆಯಂದು ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರೆ ಇಷ್ಟಾರ್ಥ ಸಿದ್ಧಿಸುತ್ತೆ ಎಂಬ ನಂಬಿಕೆಯಿದೆ. ಹೀಗಾಗಿ ಅಮೂಲ್ಯ ಮತ್ತು ಪತಿ ಜಗದೀಶ್ ಈ ಹಿಂದೆಯೂ ಜೊತೆಯಲ್ಲಿ ಆದಿಚುಂಚನಗಿರಿ ಕ್ಷೇತ್ರಕ್ಕೆ ಬಂದು ಅಮವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಕಳೆದ ಏಪ್ರಿಲ್ 26 ರಂದು ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸಿದ್ದರು. ಅದೇ ದಿನ ಅಮೂಲ್ಯ ಮತ್ತು ಜಗದೀಶ್ ಜೊತೆಯಾಗಿ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸಿದ್ದರು. ಇದೀಗ ಮತ್ತೆ ಅಮೂಲ್ಯ ಪತಿಯೊಂದಿಗೆ ಅಮವಾಸ್ಯೆ ಪೂಜೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಅಮೂಲ್ಯ-ಜಗದೀಶ್, ಹೆಚ್ಡಿಕೆ ದಂಪತಿಯಿಂದ ಆದಿಚುಂಚನಗಿರಿಯಲ್ಲಿ ವಿಶೇಷ ಪೂಜೆ
ಸತತ ಮೂರು ಬಾರಿ ಅಮವಾಸ್ಯೆ ಪೂಜೆ ಸಲ್ಲಿಸಿದ್ರೆ ನಮ್ಮ ಬೇಡಿಕೆ ಫಲಿಸುತ್ತೆ ಎಂಬ ಅಗಾಧ ನಂಬಿಕೆ ಕಾಲಭೈರವೇಶ್ವರ ಸ್ವಾಮಿ ಭಕ್ತರಲ್ಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಎಲ್ಲರೂ ತಮ್ಮ ಪತ್ನಿ ಸಮೇತರಾಗಿ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ, ರಾಜಕೀಯವಾಗಿ ಇಷ್ಟಾರ್ಥ ಸಿದ್ಧಿಸುವಂತೆ ಸತತ ಮೂರು ಬಾರಿ ಅಮವಾಸ್ಯೆ ಪೂಜೆ ಸಲ್ಲಿಸಿದ್ದರು, ಇದೀಗ ಅಮೂಲ್ಯ ತಮ್ಮ ಪತಿಯೊಂದಿಗೆ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಅಮವಾಸ್ಯೆ ಪೂಜೆ ಸಲ್ಲಿಸುತ್ತಿರೋದು ಕುತೂಹಲಕ್ಕೆ ಕಾರಣವಾಗಿದೆ.