ಮಂಡ್ಯ: ಚಿತ್ರ ನಟಿ ಅಮೂಲ್ಯ ತಮ್ಮ ಭಾವಿ ಪತಿಯೊಂದಿಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಶ್ರೀ ಕಾಲಭೈರವೇಶ್ವರ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸಿದ್ರು.
ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿರುವ ಅಮೂಲ್ಯ ಮತ್ತು ಜಗದೀಶ್ ದೇವರ ಸನ್ನಿಧಿಯಲ್ಲಿ ಕುಳಿತು ಕಾಲಭೈರವ ಕ್ಷೇತ್ರಾದಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಅಮೂಲ್ಯ ತಮ್ಮ ಭಾವಿ ಪತಿಯೊಂದಿಗೆ ಪೂಜೆ ಸಲ್ಲಿಸುತ್ತಿದ್ದು, ಕ್ಷೇತ್ರಕ್ಕೆ ಪೂಜೆಗೆ ಬಂದ ಭಕ್ತರು ಯುವ ಜೋಡಿಯನ್ನು ಕುತೂಹಲದಿಂದ ನೋಡುತ್ತಿದ್ರು.
ಹೆಚ್ಡಿಕೆ ದಂಪತಿಯಿಂದ್ಲೂ ವಿಶೇಷ ಪೂಜೆ: ಇಂದು ಅಮಾವಾಸ್ಯೆ ಪೂಜೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿಯವರು ಕೂಡ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸ್ವತಃ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಅಮವಾಸ್ಯೆ ಪೂಜೆ ನೆರವೇರಿಸಿಕೊಟ್ರು. ರಾತ್ರಿಯೇ ಬಂದು ಶ್ರೀ ಮಠದಲ್ಲಿ ವಾಸ್ತವ್ಯವಿದ್ದ ದಂಪತಿ ಮುಂಜಾನೆಯಿಂದಲೇ ಹೋಮ, ಹವನಾದಿಯೊಂದಿಗೆ ಕಾಲಭೈರವೇಶ್ವರಸ್ವಾಮಿಯ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡ್ರು. ಭಕ್ತಿ ಭಾವದಿಂದ ಕಾಲ ಭೈರವನಿಗೆ ವಿಶೇಷ ಪೂಜೆ ಸಲ್ಲಿಸಿದ್ರು.
ಕಳೆದ ಕೆಲ ಅಮವಾಸ್ಯೆಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಪತ್ನಿ ಚನ್ನಮ್ಮ ಅವರೊಂದಿಗೆ ಕಾಲಭೈರವೇಶ್ವರಸ್ವಾಮಿ ಸನ್ನಿಧಿಗೆ ಬಂದು ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸಿದ್ರು. ಮಳೆ ಬೆಳೆ ಸೇರಿದಂತೆ, ರಾಜಕೀಯ ಯಶಸ್ಸಿಗೂ ದೇವೇಗೌಡ ದಂಪತಿ ಕಾಲಭೈರವ ಕ್ಷೇತ್ರಾದಿ ದೇವತೆಗಳಿಗೆ ಪೂಜೆ ಸಲ್ಲಿಸಿದ್ರು. ಈ ಹಿನ್ನೆಲೆಯಲ್ಲಿ ಇಂದು ಕುಮಾರಸ್ವಾಮಿ ತಮ್ಮ ಪತ್ನಿಯೊಂದಿಗೆ ಕಾಲಭೈರವೇಶ್ವರ ಕ್ಷೇತ್ರಾದಿ ದೇವತೆಗಳಿಗೆ ಪೂಜೆ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಒಟ್ಟಿಗೆ ಕಾಲಭೈರವೇಶ್ವರನ ಎದುರು ಕುಳಿತು ಪೂಜೆ ಸಲ್ಲಿಸುತ್ತಿದ್ದು ಭಕ್ತಾದಿಗಳು ಮತ್ತು ಅಭಿಮಾನಿಗಳ ಗಮನ ಸೆಳೆಯಿತು.