ಮಲಯಾಳಂ ಚಿತ್ರೋದ್ಯಮದ ಹೆಸರಾಂತ ನಟ ಮೋಹನ್ ಲಾಲ್ (Mohan Lal) ಇಂದು ತಿರುಪತಿ ತಿಮ್ಮಪ್ಪನ (Tirupati Thimmappa) ಸನ್ನಿಧಾನಕ್ಕೆ ಆಗಮಿಸಿದ್ದರು. ತಮ್ಮ ಟೀಮ್ ಜೊತೆ ಬಂದಿದ್ದ ಮೋಹನ್ ಲಾಲ್ ಪೂಜೆ ಸಲ್ಲಿಸಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಕೆಲ ಹೊತ್ತು ದೇವಸ್ಥಾನದ ಆವರಣದಲ್ಲೇ ನಟ ಇದ್ದರು. ನಂತರ ಅಭಿಮಾನಿಗಳ ಜೊತೆ ಸಮಯ ಕಳೆದರು.
ಈ ನಡುವೆ ಮೋಹನ್ ಲಾಲ್ ಸದ್ಯ ವೃಷಭ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೊಂದು ಬೃಹತ್ ಸಾಹಸಮಯ ಚಿತ್ರವಾಗಿದ್ದು, ಮೈ ಜುಂ ಎನಿಸುವಂತಹ ಸಾಹಸ ಮತ್ತು ರೋಚಕ ದೃಶ್ಯಗಳು ಇವೆ. ಮೋಹನ್ ಲಾಲ್ ಜೊತೆಗೆ ರೋಶನ್ ಮೇಕಾ, ಶನಾಯ ಕಪೂರ್, ಝಾರಾ ಖಾನ್, ಶ್ರೀಕಾಂತ್ ಮೇಕಾ ಮುಂತಾದವರು ನಟಿಸುತ್ತಿದ್ದಾರೆ. ಕನ್ನಡದ ರಾಗಿಣಿ ದ್ವಿವೇದಿ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
‘ಕಾಂದಹಾರ್’ ನಂತರ ಇದೇ ಎರಡನೆಯ ಬಾರಿಗೆ ಮೋಹನ್ ಲಾಲ್ ಜೊತೆಗೆ ರಾಗಿಣಿ (Ragini Dwivedi) ನಟಿಸುತ್ತಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ನಿರ್ದೇಶಕ ನಂದಕಿಶೋರ್ (Nandakishor) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.