ವರನಟ ಡಾ.ರಾಜ್ಕುಮಾರ್ (Rajkumar) ಇಂದು (ಏ.24) 95ನೇ ವರ್ಷದ ಹುಟ್ಟುಹಬ್ಬವಾಗಿದ್ದು, ಕುಟುಂಬಸ್ಥರ ಭೇಟಿ ಬೆನ್ನಲ್ಲೇ ನವರಸ ನಾಯಕ ಜಗ್ಗೇಶ್ (Jaggesh) ಕೂಡ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದ್ದಾರೆ. ತಾವು ಆತ್ಮಹತ್ಯೆಗೆ ಪ್ರಯತ್ನಿಸಿದ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದು ಅಣ್ಣಾವ್ರು ಧೈರ್ಯ ತುಂಬಿದ್ದರು ಎಂದು ಹಳೆಯ ದಿನಗಳನ್ನು ಜಗ್ಗೇಶ್ ಸ್ಮರಿಸಿದ್ದಾರೆ. ಡಾ.ರಾಜ್ಕುಮಾರ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.
1994ರ ಸಮಯದಲ್ಲಿ ಅವರ ಸಿನಿಮಾಗಳು ಫ್ಲಾಪ್ ಆದವು. ಇದರಿಂದ ಬೇಸರಗೊಂಡ ಜಗ್ಗೇಶ್ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು. ನನ್ನ ಪರ ನಿಂತಿದ್ದು ಅಣ್ಣಾವ್ರು ಎಂದಿದ್ದಾರೆ. ಆಗ ನಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ, ಆಸ್ಪತ್ರೆಗೆ ನನ್ನನ್ನು ದಾಖಲಿಸಿದ್ದರು. ಅಂದು ಅಣ್ಣಾವ್ರು ಬಂದು ತಲೆ ಮೇಲೆ ಕೈ ಇಟ್ಟು ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದರು. ಯಾವುದೇ ಕಾರಣಕ್ಕೂ ಅತಿಯಾದ ಆಸೆ ಬೇಡ, ಜಗತ್ತನ್ನು ಮೆಚ್ಚಿಸಿ ಬದುಕೋಕೆ ಹೋಗಬಾರದು ಎಂದು ಕಿವಿಹಿಂಡಿದ್ದರು. ನನಗೆ ಮಾನಸಿಕವಾಗಿ ನನ್ನ ಜೊತೆ ನಿಂತರು. ಅವರ ಆಶೀರ್ವಾದದ ನಂತರ ನನ್ನ ಸಿನಿಮಾಗಳು ಮಾಸಿವ್ ಹಿಟ್ ಆದವು ಎಂದು ಅಣ್ಣಾವ್ರರನ್ನು ನೆನಪಿಸಿಕೊಂಡರು ಜಗ್ಗೇಶ್. ಇದನ್ನೂ ಓದಿ:ಹರ್ಷಿಕಾ ಹಲ್ಲೆ ಪ್ರಕರಣ- ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭುವನ್ ದಂಪತಿ ಭೇಟಿ
ನಮ್ಮ ತಂದೆ ಮತ್ತು ರಾಜ್ಕುಮಾರ್ ಮೂಗು ಸೇಮ್ ಇದೆ. ನನಗೆ ರಾಜಣ್ಣ ಅಂದ್ರೆ ಪಂಚಪ್ರಾಣ. ನಾನು ಅವರಲ್ಲಿ ತಂದೆಯ ವಾತ್ಸಲ್ಯ ಕಂಡೆ. ನಾನು ಹೊಸದಾಗಿ ಮನೆ ಕಟ್ಟಿದೀನಿ ಬರಬೇಕು ಎಂದೆ. ಬೆಳಿಗ್ಗೆ 11 ಗಂಟೆಗೆ ಬಂದರು. ಮಧ್ಯಾಹ್ನ 3 ಗಂಟೆವರೆಗೂ ಕೂತು ಮಾತನಾಡಿದ್ದರು. ಅನೇಕ ನೆನಪುಗಳು, ಒಡನಾಟ ಇವೆ. ರಾಜ್ಕುಮಾರ್ ಕೊನೆಯ ಜರ್ನಿಯಲ್ಲಿ ನಾನಿದ್ದೆ. ಅವರ ಮೃತದೇಹದ ಜೊತೆಗೆ ನಾನು ಇಡೀ ದಿನ ಇದ್ದೆ. ಅಂದು ಅವರನ್ನು ಮಣ್ಣಿಗೆ ಹಾಕುವಾಗ ನೋಡಲು ಆಗಲಿಲ್ಲ. ಚಿತ್ರರಂಗಕ್ಕೆ ನಮಗೆಲ್ಲಾ ರಾಜಮಾರ್ಗ ಹಾಕಿ ಕೊಟ್ಟರು ಎಂದು ಜಗ್ಗೇಶ್ ಮಾತನಾಡಿದ್ದಾರೆ.
ಅಂದಹಾಗೆ, 1992ರಲ್ಲಿ ರಿಲೀಸ್ ಆದ ‘ತರ್ಲೆ ನನ್ಮಗ’ ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು. ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರು. ನವರಸ ನಾಯಕ ಎಂದು ಗುರುತಿಸಿಕೊಂಡರು.